ಮುದ್ದೇಬಿಹಾಳ : ಗ್ರಾಹಕರಿಗೆ ಬಡ್ಡಿ ಹೊರೆ ಆಗಬಾರದು ಎಂಬ ಕಾರಣಕ್ಕೆ ಲಾಭಾಂಶದ ಪ್ರಮಾಣ ಹೆಚ್ಚಿಸಿಲ್ಲ ಎಂದು ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ಏಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ನ 65ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕು 395.65 ಲಕ್ಷ ರೂ.ಆದಾಯ ಗಳಿಸಿದ್ದು ಅದರಲ್ಲಿ ನಿವ್ವಳ 96.87 ಲಕ್ಷ ರೂ.ಲಾಭ ಗಳಿಸಿದೆ.ಪ್ರಸಕ್ತ ಸಾಲಿನಲ್ಲಿ ಎಲ್ಲ ಸದಸ್ಯರಿಗೆ ಅಪಘಾತ ವಿಮೆ ಸೌಲಭ್ಯ ಕಲ್ಪಿಸುತ್ತಿದ್ದು ಅದಕ್ಕೆ ತಗಲುವ ವಿಮೆ ಕಂತಿನ ಹಣವನ್ನು ಪ್ರತಿ ವರ್ಷ ಬ್ಯಾಂಕಿನಿಂದಲೇ ಭರಣಾ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ.
9268 ಸದಸ್ಯರಿಗೆ ವಿಮೆ ಪಾವತಿಸಲಾಗುತ್ತಿದೆ. ಅಪಘಾತವಾಗಿ ಅಂಗವೈಕಲ್ಯ ಉಂಟಾದರೆ ಒಂದು ಲಕ್ಷ,ಮೃತಪಟ್ಟರೆ ಎರಡು ಲಕ್ಷ ರೂ.ಮೃತರ ಅವಲಂಬಿತರಿಗೆ ವಿಮಾ ಕಂಪನಿಯಿಂದ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಹಕರಾದ ಬಸನಗೌಡ ಪಾಟೀಲ್, ಬಾಬು ಬಿರಾದಾರ, ಶರಣಯ್ಯ ಹಿರೇಮಠ, ಬಿ.ಎಸ್.ಮೇಟಿ ಮಾತನಾಡಿ, ಬ್ಯಾಂಕಿನಿಂದ ಕಳೆದ ಮೂರು ವರ್ಷಗಳಿಂದ ಗ್ರಾಹಕರಿಗೆ ಲಾಭಾಂಶದ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದ್ದರೂ ಅದನ್ನು ಈಡೇರಿಸಿಲ್ಲ. ಡಿವ್ಹಿಡೆಂಡ್ ಹೆಚ್ಚಿಸಿ ಎಂದು ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಅಧ್ಯಕ್ಷ ಓಸ್ವಾಲ್,ನಮ್ಮ ಬ್ಯಾಂಕ್ ಗ್ರಾಹಕರು ಪಡೆದುಕೊಳ್ಳುವ ಸಾಲದ ಮೇಲೆ ಬಡ್ಡಿದರ ಹೆಚ್ಚಳ ಮಾಡಿ ಅದರಿಂದ ಬಂದ ಆದಾಯವನ್ನು ಲಾಭಾಂಶದ ರೂಪದಲ್ಲಿ ಹೆಚ್ಚಿಸಿಕೊಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಹಿರಿಯ ನಿರ್ದೇಶಕರಾದ ಎಸ್.ಎಸ್.ಮಾಲಗತ್ತಿ, ವೆಂಕನಗೌಡ ಪಾಟೀಲ್ ಮಾತನಾಡಿದರು.
ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ, ಉಪಾಧ್ಯಕ್ಷ ಸಿ.ಎಲ್.ಬಿರಾದಾರ, ನಿರ್ದೇಶಕರಾದ ರಾಜಶೇಖರ ಕರಡ್ಡಿ, ಪ್ರಭುದೇವ ಕಲ್ಬುರ್ಗಿ, ರುದ್ರಪ್ಪ ಕಡಿ, ಜಿ.ಬಿ.ಪಾಟೀಲ್, ಶ್ರೀದೇವಿ ಮದರಿ, ವೃತ್ತಿಪರ ನಿರ್ದೇಶಕ ಸುನೀಲ ಇಲ್ಲೂರ ಇದ್ದರು.
ಇದನ್ನೂ ಓದಿ: ಚುನಾವಣೆ ನಡೆದ ನಾಲ್ಕರಲ್ಲಿ ಮೂರು ಸ್ಥಾನ BJP ಪಾಲು.. ಆದ್ರೂ PLD ಬ್ಯಾಂಕ್ ಗದ್ದುಗೆ ಕಾಂಗ್ರೆಸ್ ಪಾಲು..! ( ವಿಡಿಯೋ ನೋಡಿ)
ವೃತ್ತಿಪರ ನಿರ್ದೇಶಕ ನಾಗಭೂಷಣ ನಾವದಗಿ ಸ್ವಾಗತಿಸಿದರು. ಎಂ.ಕೆ.ರಾಯಗೊಂಡ ಸುಮಾ ನಾಡಗೌಡ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.