ಮುದ್ದೇಬಿಹಾಳ : ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಇಲ್ಲಿನ ಕಿಲ್ಲಾದ ಹೊಸಮಠದಲ್ಲಿ ದ್ಯಾಮವ್ವ ದೇವಿ ಹಾಗೂ ಶಾರದಾ ದೇವಿಯರ ಮೂರ್ತಿ ಮೆರವಣಿಗೆಗೆ ಚಾಲನೆ ದೊರೆಯುವ ಮೂಲಕ ಐದು ದಿನಗಳ ಜಾತ್ರೆಗೆ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು.
ಪಟ್ಟಣದ ಕಿಲ್ಲಾದಿಂದ ಜಾತ್ರೋತ್ಸವದ ಮೂಲ ಬಾಬುದಾರರಾದ ನಾಡಗೌಡ, ರಾಯನಗೌಡ, ನಡಿಗೇರಿ ಕುಟುಂಬದವರು ಆರುತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ದೊರೆಯಿತು.
ಮೆರವಣಿಗೆಯಲ್ಲಿ ಚಿತ್ರದುರ್ಗದ ವೀರಗಾಸೆ, ಚಿಕ್ಕಮಂಗಳೂರಿನ ಮಹಿಳಾ ವೀರಗಾಸೆ, ಚಿತ್ರದುರ್ಗದ ಕೋಳಿ ಕುಣಿತ ಮತ್ತು ಚಿಲಿಪಿಲಿ ಗೊಂಬೆ ಕುಣಿತ, ವಿಜಯನಗರದ ನಂದಿಕೋಲು ಕುಣಿತ, ಮಂಗಳೂರಿನ ಚಂಡಿಕಾವಾದ್ಯ, ಮಂಗಳೂರಿನ ಹುಲಿ ವೇಷ ಕುಣಿತ, ಕೊಣ್ಣೂರಿನ ಮಹಿಳಾ ಡೊಳ್ಳು ಕುಣಿತ, ಹಿರೂರಿನ ಕರಡಿ ಮಜಲು, ಸ್ಥಳೀಯ ಸನಾದಿ, ಬ್ಯಾಂಡ್ಸೆಟ್, ಕುದುರೆ ಕುಣಿತ, ಒಂಟೆ, ಹಲಗಿ ಮೇಳ, ಜೋಗತಿ ನೃತ್ಯ ಹಾಗೂ ಕಲಾ ತಂಡಗಳು ಹಾಗೂ ಕುಂಭ ಹೊತ್ತಿದ್ದ ನೂರಾರು ಮಹಿಳೆಯರು ಮೆರವಣಿಗೆಯ ಮೆರಗು ಹೆಚ್ಚಿಸಿದ್ದರು.
ಮೆರವಣಿಗೆಯಲ್ಲಿ ನಾಡಗೌಡ ಮನೆತನದ ಜೊತೆಗೆ ನಿಕಟ ಸಂಬಂಧ ಹೊಂದಿರುವ ವಿವಿಧ ಸೇವಾಕರ್ತರು, ಬಾಬುದಾರರು ಆಯುಧಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ಹೊಸಮಠದಿಂದ ಆರಂಭಗೊಂಡ ಮೆರವಣಿಗೆ ಟಿಪ್ಪು ಸರ್ಕಲ್,ಸರಾಫ ಬಜಾರ ಮಾರ್ಗ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ಗಣಪತಿ ದೇವಸ್ಥಾನ, ರಾಘವೇಂದ್ರ ಸ್ವಾಮಿಗಳ ಮಠ, ವಾಲ್ಮೀಕಿ ವೃತ್ತ, ಶಾರದಾ ದೇವಿ ಗುಡಿ, ಲಕ್ಷ್ಮಿ ವೆಂಕಟೇಶ್ವರ ಗುಡಿ ಮಾರ್ಗವಾಗಿ ದ್ಯಾಮವ್ವನ ಕಟ್ಟೆಗೆ ಸಾಗಿ ದೇವಿಯವರನ್ನು ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯಲ್ಲಿ ಜಾತ್ರಾ ಕಮೀಟಿಯ ಪದಾಧಿಕಾರಿಗಳು, ಊರಿನ ಗಣ್ಯರು, ಸಂಘ ಸಂಸ್ಥೆಯ ಮುಖಂಡರು, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು: ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಸೇರಿದಂತೆ ಹಲವು ಮುಸ್ಲಿಂ ಸಮಾಜದ ಮುಖಂಡರು ಗ್ರಾಮದೇವತೆ ಜಾತ್ರೆಯಲ್ಲಿ ಭಾಗಿಯಾಗಿದ್ದಲ್ಲದೇ ಚಿತ್ರದುರ್ಗದ ಚಂಡಿಕಾವಾದ್ಯ ವಾದನಕ್ಕೆ ಹೆಜ್ಜೆ ಹಾಕಿ ಕೋಮು ಸಾಮರಸ್ಯ ಮೆರೆದರು.
ಡಿಜೆ ಅಬ್ಬರದಲ್ಲಿ ಕುಂದಿದ ಸಾಂಪ್ರದಾಯಿಕ ವಾದನಗಳ ಮೆರಗು:
ಪಟ್ಟಣದ ಹೊಸಮಠದಿಂದ ಆರಂಭಗೊಂಡಿದ್ದ ಮೆರವಣಿಗೆಯಲ್ಲಿ ಚಿತ್ರದುರ್ಗ, ಚಿಕ್ಕಮಗಳೂರು, ವಿಜಯನಗರ, ಕೊಣ್ಣೂರು ಮೊದಲಾದ ದೂರದ ಊರುಗಳಿಂದ ಆಗಮಿಸಿದ್ದ ಸಾಂಪ್ರದಾಯಿಕ ವಾದನಗಳ ತಾಳವು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು. ಉತ್ಸಾಹದಿಂದಲೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಆಯಾ ವಾದನಗಳಿಗೆ ಹೆಜ್ಜೆ ಹಾಕುವುದು ಕಂಡು ಬಂದಿತು. ಹಳೇ ತಹಸೀಲ್ದಾರ್ ಕಚೇರಿ ಬಳಿ ಡಿಜೆ ಅಬ್ಬರದ ಸಪ್ಪಳದಲ್ಲಿ ಸಾಂಪ್ರದಾಯಿಕ ವಾದನಗಳ ಕಳೆ ಕುಂದುವಂತಾಯಿತು. ಡಿಜೆ ಸಂಗೀತಕ್ಕೆ ಯುವಕರು ಹುಚ್ಚೆದ್ದು ಕುಣಿದರು.
ಭಾರೀ ಪೊಲೀಸ್ ಭದ್ರತೆ: ಗ್ರಾಮದೇವತೆ ಜಾತ್ರೆಯ ಅಂಗವಾಗಿ ಸಿಪಿಐ ಮೊಹ್ಮದಫಸಿವುದ್ದೀನ ನೇತೃತ್ವದಲ್ಲಿ ಪಿಎಸ್ಐ ಸಂಜಯ ತಿಪರೆಡ್ಡಿ, ಸುರೇಶ ಮಂಟೂರ, ರಾಮನಗೌಡ ಸಂಕನಾಳ ಸೇರಿದಂತೆ ತಾಳಿಕೋಟಿ, ನಿಡಗುಂದಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.