ಮುದ್ದೇಬಿಹಾಳ : ಸಮಾಜ ಸೇವಕ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್.ಮದರಿ ಅವರು ತಮ್ಮ ಪುತ್ರ ಕಿರಣ ಅವರ ಮದುವೆ ಕಾರ್ಯಕ್ರಮದೊಂದಿಗೆ 46 ಜೋಡಿಗಳಿಗೆ ಉಚಿತವಾಗಿ ಸಾಮೂಹಿಕವಾಗಿ ಮದುವೆ ಮಾಡಿಕೊಡುವ ಕಾರ್ಯಕ್ರಮವನ್ನು ಮೇ.18 ರಂದು ಆಯೋಜಿಸಿದ್ದಾರೆ.
ಪಟ್ಟಣದ ಅಭ್ಯುದಯ ಪಿ.ಯು ಸೈನ್ಸ್ ಕಾಲೇಜು ಪಕ್ಕದಲ್ಲಿರುವ ಜಾಗೆಯಲ್ಲಿ ಮದುವೆ ಕಾರ್ಯಕ್ರಮಕ್ಕಾಗಿ ಮಳೆ ನೀರು ಬೀಳದಂತ (ವಾಟರ್ಫ್ರೂಫ್) ಶಾಮಿಯಾನ ಹಾಕಿಸಿದ್ದಾರೆ. ಕಾರ್ಯಕ್ರಮಕ್ಕೆ ಕಲ್ಯಾಣ ಮಹೋತ್ಸವ ಎಂದು ಹೆಸರಿಟ್ಟಿದ್ದು ಮದುವೆ ಕಾರ್ಯಕ್ರಮದ ವಿವರಗಳನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹಂಚಿಕೊಂಡರು.
ಪ್ರತಿ ವರ್ಷ ತಮ್ಮ ಸ್ವಂತ ಊರು ಖಿಲಾರಹಟ್ಟಿಯಲ್ಲಿ ಬೀರಲಿಂಗೇಶ್ವರ, ಕಾಡಸಿದ್ದೇಶ್ವರ, ದ್ಯಾಮವ್ವ ದೇವಿ ಜಾತ್ರೆಯ ಸಮಯದಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದ್ದೇವು. ಆದರೆ, ಈ ವರ್ಷ ಪುತ್ರನ ಮದುವೆ ಮಾಡುತ್ತಿರುವ ಕಾರಣ ಸಾಮೂಹಿಕ ವಿವಾಹಗಳನ್ನು ಇದೇ ಮದುವೆಯಲ್ಲಿ ಆಯೋಜಿಸುವುದು ಸೂಕ್ತ ಎಂದು ತೀರ್ಮಾನಿಸಿ ಕುಟುಂಬದವರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಒಟ್ಟು 46 ಜೋಡಿ ನೋಂದಾಯಿಸಿಕೊಂಡಿದ್ದು ವಧು ವರರಿಗೆ ಎರಡು ಜೊತೆ ಬಟ್ಟೆ,ತಾಳಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಮುಖಂಡ ಭಾಗಣ್ಣ ಕಡ್ಲಿ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ ಇದ್ದರು.
ಭಾಷಣ, ವೇದಿಕೆ ಕಾರ್ಯಕ್ರಮ ಇಲ್ಲ: ಇಡೀ ಮುದ್ದೇಬಿಹಾಳ ತಾಲ್ಲೂಕಿಗೆ ಆಹ್ವಾನ ನೀಡಲಾಗಿದೆ. ಅದರಲ್ಲೂ ಎಲ್ಲ ರಾಜಕೀಯ ನಾಯಕರು, ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದು ವೇದಿಕೆ ಕಾರ್ಯಕ್ರಮ ನಾವು ಮಾಡುತ್ತಿಲ್ಲ. ಯಾವುದೇ ಭಾಷಣ ಇರುವುದಿಲ್ಲ. ಮದುವೆಯ ಮಾಂಗಲ್ಯಧಾರಣ ಸಮಯ ನಿಗದಿತ ವೇಳೆ ಮದ್ಯಾಹ್ನ 12.20ಕ್ಕೆ ಸಾಮೂಹಿಕವಾಗಿ ಮಾಂಗಲ್ಯಧಾರಣ ನಡೆಯಲಿದೆ. ಇದಕ್ಕೆ ಸ್ವಾಮೀಜಿಗಳು ಸಾಕ್ಷೀಕರಿಸಲಿದ್ದಾರೆ. ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ನೀರೀಕ್ಷೆ ಇದೆ ಎಂದು ತಿಳಿಸಿದರು.
ಮದುವೆ ಊಟಕ್ಕೆ ತಿರುಪಡಿ ಲಾಡು, ಬಾಂಬೆ ಹಲ್ವಾ : ಪುತ್ರನ ಮದುವೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ತಿರುಪತಿ ಲಾಡು ಹಾಗೂ ಬಾಂಬೆ ಹಲ್ವಾ ವ್ಯವಸ್ಥೆ ಮಾಡಿಸಿದ್ದೇವೆ.ತಿರುಪಡಿ ಲಾಡು ಸಿದ್ಧಪಡಿಸುವ ಬಾಣಸಿಗರನ್ನು ಕರೆಯಿಸಲಾಗಿದೆ. ಊಟಕ್ಕೆ ಎರಡು ತರಹದ ಪಲ್ಯೆ,ಮೊಸರನ್ನ, ಎರಡು ಸಿಹಿ,ಅನ್ನ ಸಾರು ವ್ಯವಸ್ಥೆ ಮಾಡಿಸಲಾಗಿದೆ. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು ಬಂದ ವಾಹನಗಳನ್ನು ನಿಲುಗಡೆ ಮಾಡಲು ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.