ಮುಧೋಳ : ನೆರೆ ಸಂತ್ರಸ್ತರಗೆ ಸೂಕ್ತ ಪರಿಹಾರ ಹಾಗೂ ಶಾಶ್ವತ ಸೂರಿಗಾಗಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಸುರಿದ ಧಾರಾಕಾರ ಮಳೆಗೂ ಜಗ್ಗದೆ ಹೋರಾಟಗಾರರು ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರೂ ಜಿಲ್ಲಾಢಳಿತ ಮಾತ್ರ ಹೋರಾಟಗಾರರ ಮನವೊಲಿಕೆಗೆ ಮುಂದಾಗಲಿಲ್ಲ.
ಬುಧವಾರ ಬೆಳಗ್ಗೆ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ ಹಾಗೂ ನೆರೆ ಸಂತ್ರಸ್ಥರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಯಾದವಾಡ ರಸ್ತೆವರೆಗೆ ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಿದ ಹೋರಾಟಗಾರರು ಸಂಜೆ 6ಗಂಟೆವರೆಗೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹೋರಾಟಗಾರರು, ಪ್ರತಿಬಾರಿ ಪ್ರವಾಹ ಉಂಟಾದಾಗ ನಾವು ನಿರಾಶ್ರಿತರಾಗುತ್ತಿದ್ದೇವೆ. ನಮಗೆ ಶಾಶ್ವತ ಸೂರು ಕಲ್ಪಿಸಬೇಕು, ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಬ್ಯಾರೇಜ್ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರೂ ಸರ್ಕಾರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರವಾಹದಲ್ಲಿ ಹಾನಿಯಾಗಿರುವ ಪ್ರತಿ ಎಕರೆಗೂ ಒಂದು ಲಕ್ಷ ರೂ. ಪರಿಹಾರ ಒದಗಿಸಬೇಕು. ಮನೆಕಳೆದುಕೊಂಡವರಿಗೆ 5ಲಕ್ಷ ರೂ. ನೀಡಬೇಕು ಹಾಗೂ ಅವೈಜ್ಞಾನಿಕ ಬ್ಯಾರೇಜ್ ಗಳ ಪುನರ್ನಿಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಸ್ತೆ ಸಂಚಾರ ತಡೆದು ಹೋರಾಟ ಮಾಡುತ್ತಿರುವ ಸುದ್ದಿ ತಿಳಿದ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಮನವೊಲಿಕೆಗೆ ಮುಂದಾದರು.
ಈ ವೇಳೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು ನಮ್ಮ ಕಷ್ಟ ಆಲಿಸಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದರು. ಉಪವಿಭಾಗಾಧಿಕಾರಿಗಳು ನಿಮ್ಮ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಈಗ ಪ್ರತಿಭಟನೆಯನ್ನು ಹಿಂಪಡೆಯಿರಿ ಎಂದು ಮಾಡಿಕೊಂಡ ಮನವಿಗೆ ಜಗ್ಗದ ಪ್ರತಿಭನಾಕಾರರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.
ಸಂಜೆ 4ಗಂಟೆ ಸುಮಾರಿಗೆ ಮುಧೋಳ ತಾಲೂಕಿನಾದ್ಯಂತ ಜೋರು ಮಳೆ ಸುರಿಯಲಾರಂಭಿಸಿತು. ಮಳೆಯಿಂದ ಎದೆಗುಂದದ ಹೋರಾಟಗಾರರು ಮಳೆಯಲ್ಲಿಯೇ ರಸ್ತೆ ಮಧ್ಯ ನಿಂತು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ನಿರಂತರ ಎರಡು ಗಂಟೆಗಳ ಕಾಲ ಮಳೆಯಲ್ಲಿ ನೆನೆದು ಹೋರಾಟ ನಡೆಸಿದರೂ ಸ್ಥಳಕ್ಕೆ ಆಗಮಿಸದ ಜಿಲ್ಲಾಡಳಿತದ ವಿರುದ್ದ ಬೇಸರ ವ್ಯಕ್ತಪಡಿಸಿದ ರೈತರು ತಮ್ಮ ಹೋರಾಟವನ್ನು ಅ.10ರವರೆಗೆ ತಾತ್ಕಾಲಿಕವಾಗಿ ಮುಂದೂಡಿದರು. ನೀಡಿರುವ ಗಡವಿನೊಳಗೆ ಸರ್ಕಾರ ನಮ್ಮೊಂದಿಗೆ ಚರ್ಚಿಸಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳದೆ ಹೋದರೆ 10ರಂದು ಉಗ್ರ ಸ್ವರೂಪದ ಹೋರಾಟ ನಡೆಯಲಿದ್ದು ಮುಂದಾಗುವ ಅನಾಗಮಹುತಕ್ಕೆ ನಾವು ಹೊಣೆಗಾರರಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ದುಂಡಪ್ಪ ಯರಗಟ್ಟಿ, ನಾಗೇಶ ಸೋರಗಾಂವಿ, ಬಂಡು ಘಾಟಗೆ, ಮುತ್ತಪ್ಪ ಕೋಮ್ಮಾರ, ನಾಗೇಶ ಗೋಲಶೇಟ್ಟಿ, ಬಸವಂತ ಕಾಂಬಳೆ, ದುಂಡಪ್ಪ ಲಿಂಗರಡ್ಡಿ, ಸದಪ್ಪ ತೇಲಿ, ಅನಂತರಾವ ಘೋರ್ಪಡೆ, ತಿಮ್ಮಣ್ಣ ನಾಯಕ, ಮಹೇಶ ಪಾಟೀಲ, ಕಲ್ಮೇಶ ಗೋಸಾರ, ರಾಜೇಂದ್ರ ಚಂದನಶಿವ, ಪರಶುರಾಮ ನಿಗಡೆ ಸೇರಿದಂತೆ ಇತರರು ಇದ್ದರು.
ಡಿವೈಎಸ್ಪಿ ಶಾಂತವೀರ ಈ, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್ಐ ಅಜಿತಕುಮಾರ ಹೊಸಮನಿ ಸೂಕ್ತ ಬಂದೋಬಸ್ತ್ ಮಾಡಿದ್ದರು.
ಪಶು ಸಂಗೋಪಣೆ ಅಧಿಕಾರಿ ವಿರುದ್ದ ಆಕ್ರೋಶ : ಹೋರಾಟದಲ್ಲಿ ರೈತರು ಚಕ್ಕಡಿಯೊಂದಿಗೆ ಭಾಗಿಯಾಗಿದ್ದರು. ರಸ್ತೆಯಲ್ಲಿ ನಿಂತಿದ್ದ ಎತ್ತುಗಳಿಗೆ ಮೇವಿನ ವ್ಯವಸ್ಥೆ ಮಾಡದ ಪಶುಸಂಗೋಪಣೆ ಅಧಿಕಾರಿ ಗೋವಿಂದ ರಾಠೋಡ ವಿರುದ್ದ ಆಕ್ರೋಶ ಹೊರಹಾಕಿದ ಪ್ರತಿಭಟನಾನಿರತರು ದಿಕ್ಕಾರ ಕೂಗಿದರು. ಬಳಿಕ ನಗರಸಭೆಯಿಂದ ಎತ್ತುಗಳಿಗೆ ಟ್ಯಾಂಕರ್ ಮೂಲಕ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು.