ಮುದ್ದೇಬಿಹಾಳ : ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕೊಕ್ಕೊ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ನಾಗಬೇನಾಳ ಹಾಗೂ ಮೈಲೇಶ್ವರ ತಂಡಗಳ ಮಧ್ಯೆ ನಡೆದಿದ್ದ ವಿವಾದದ ಕುರಿತು ಅಂತಿಮ ಫಲಿತಾಂಶ ಪ್ರಕಟಿಸಲಾಗಿದ್ದು ತಾಳಿಕೋಟಿ ತಾಲ್ಲೂಕು ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿಗಳು ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಕ್ರೀಡಾ ಸಮಿತಿ ಅಧ್ಯಕ್ಷ,ಬಿಇಒ ಬಿ.ಎಸ್.ಸಾವಳಗಿ ತಿಳಿಸಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಬಿಇಒ ಕಚೇರಿಯ ಎದುರಿಗೆ ಶನಿವಾರ ನಾಗಬೇನಾಳದ ಕೆಲವು ಯುವಕರೊಂದಿಗೆ ಕೊಕ್ಕೊ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಕರೆತಂದು ತಮಗೆ ಫೈನಲ್ ಪಂದ್ಯದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಆರಂಭಿಸಿದ್ದರು.
ಕೊಕ್ಕೊ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಮೈಲೇಶ್ವರ ಶಾಲೆಯ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದರು.
ಬಿಇಒ ಅವರ ಸೂಚನೆ ಮೇರೆಗೆ ಇದಕ್ಕೆ ಸಹಮತ ವ್ಯಕ್ತಪಡಿಸಿದ ಮೈಲೇಶ್ವರ ಬ್ರಿಲಿಯಂಟ್ ಶಾಲೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ, ಸಿಬ್ಬಂದಿ ಚನ್ನಬಸವ ಮೂಲಿಮನಿ ಆಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಎಸ್.ಟಿ.ಎಸ್ ಸಂಖ್ಯೆ, ಅಸಲಿ ಆಧಾರ್ ಕಾರ್ಡ ಹಾಗೂ ಆಟಗಾರರ ಪ್ರವೇಶ ಪತ್ರದ ಅರ್ಜಿಗಳನ್ನು ನಾಗಬೇನಾಳ ಶಾಲೆಯ ಶಿಕ್ಷಕ ಅಣ್ಣಪ್ಪ ಅವರ ಎದುರಿಗೆ ತಂದು ಪರಿಶೀಲನೆ ನಡೆಸಲು ತಿಳಿಸಿದರು.
ಬಿಆರ್ಸಿ ಯು.ಬಿ.ಧರಿಕಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಬಿ.ಎಸ್.ಹೊಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ,ಪ್ರಧಾನ ಕಾರ್ಯದರ್ಶಿ ಎನ್.ಎಸ್.ತುರುಡಗಿ, ಶಿಕ್ಷಕ ಲೋಹಿತ ಭೋವಿ, ಸಂಗಮೇಶ ನವಲಿ ಹಾಗೂ ನಾಗಬೇನಾಳದ ಯುವಕರ ಸಮ್ಮುಖದಲ್ಲಿ ಮೈಲೇಶ್ವರ ಶಾಲೆಯ ವಿದ್ಯಾರ್ಥಿಗಳ ದಾಖಲೆಗಳನ್ನು ತಪಾಸಣೆ ನಡೆಸಲಾಯಿತು. ಆಗ ನಾಗಬೇನಾಳ ಶಾಲೆಯ ಶಿಕ್ಷಕ ಅಣ್ಣಪ್ಪ , ಎಲ್ಲ ದಾಖಲೆಗಳು ಶಾಲೆಯ ದಾಖಲೆಗಳಿಗೆ ಸರಿ ಹೊಂದುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಇಒ ಬಿ.ಎಸ್. ಸಾವಳಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ತುರುಡಗಿ ಮತ್ತಿತರರು, ಮೈಲೇಶ್ವರದ ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿಗಳ ದಾಖಲೆಗಳು ಸರಿ ಇದ್ದು ಅವರೇ ಫೈನಲ್ ಪಂದ್ಯದಲ್ಲಿ ವಿಜಯಶಾಲಿಯಾಗಿದ್ದಾರೆ. ನಾಗಬೇನಾಳದ ಶಾಲೆಯ ವಿದ್ಯಾರ್ಥಿಗಳು, ಯುವಕರ ಆಪಾದನೆಯಲ್ಲಿ ಹುರುಳಿಲ್ಲ ಎಂದು ತಿಳಿಸಿದರು.
ಗೂಡ್ಸ್ ವಾಹನದಲ್ಲಿ ಬಂದು ಹಸಿವಿನಿಂದ ಕಂಗೆಟ್ಟ ವಿದ್ಯಾರ್ಥಿಗಳು

ತಮಗೆ ಫೈನಲ್ ಪಂದ್ಯಾವಳಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕೆಲವು ಯುವಕರ ಮಾತು ಕೇಳಿಕೊಂಡು ಬಿಇಒ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದ ಕೊಕ್ಕೊ ತಂಡದಲ್ಲಿ ಪಾಲ್ಗೊಂಡಿದ್ದ ನಾಗಬೇನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಗೂಡ್ಸ್ ವಾಹನದಲ್ಲಿ ಅಸುರಕ್ಷಿತ ರೀತಿಯಲ್ಲಿ ಕರೆತಂದಿರುವುದು ಕಂಡು ಬಂದಿತು.
ವಿದ್ಯಾರ್ಥಿಗಳನ್ನು ಪಾಲಕರ, ಶಿಕ್ಷಕರ ಪೂರ್ವಾನುಮತಿ ಇಲ್ಲದೇ ಪ್ರತಿಭಟನೆಗೆ ಕಳಿಸಿಕೊಟ್ಟವರು ಯಾರು? ಎಂಬ ಬಗ್ಗೆ ಕೊನೆಯವರೆಗೂ ಸ್ಪಷ್ಟತೆ ದೊರೆಯಲಿಲ್ಲ. ಅಲ್ಲದೇ ನಾಲ್ಕು ತಾಸುಗಳ ಕಾಲ ಬಿಇಒ ಕಚೇರಿ ಆವರಣದಲ್ಲಿ ವಿದ್ಯಾರ್ಥಿಗಳು ಹಸಿವಿನಿಂದ ಬಳಲಿದರು.
ಪ್ರತಿಭಟನೆಗೆ ಕರೆತಂದಿದ್ದ ಯುವಕರಲ್ಲಿ ಕೊಕ್ಕೊ ಪಂದ್ಯಾವಳಿಯಲ್ಲಿ ಅನ್ಯಾಯ ಮಾಡಿದ ಕುರಿತಾಗಿ ಆಪಾದನೆ ಮಾಡಿದ ಬಗ್ಗೆ ಯಾವುದೇ ಅಧಿಕೃತ ದಾಖಲೆ ಇಲ್ಲದೇ ಇರುವುದು ಯಾರೋ ಹೇಳಿದ್ದನ್ನು ತಂದು ಆರೋಪಿಸಲು ಮುಂದಾಗಿದ್ದು ನಾಗಬೇನಾಳ ಯುವಕರ, ವಿದ್ಯಾರ್ಥಿಗಳ ಪ್ರತಿಭಟನೆ ಪ್ರತಿಷ್ಠೆಗಾಗಿ ಮಾಡಿದಂತೆ ಕಂಡು ಬಂದಿತು. ಅಚ್ಚರಿಯ ಸಂಗತಿ ಎಂದರೆ ಶಾಲೆಯ ಮಹತ್ವದ ದಾಖಲೆ ಇಟ್ಟಿದ್ದರೆನ್ನಲಾದ ಚೀಲವೊಂದನ್ನು ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದು ಆ ಶಾಲೆಯ ಶಿಕ್ಷಕರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಯಿತು.
ಪ್ರತಿಭಟನೆ ನಡೆದರೂ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ ಕೊನೆಯ ಕ್ಷಣದವರೆಗೂ ಕಚೇರಿ ಹತ್ತಿರವೇ ಸುಳಿಯಲಿಲ್ಲ. ತಾಳಿಕೋಟಿಯಲ್ಲಿ ದಸರಾ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾಗಿ ಸುದ್ದಿಗಾರರಿಗೆ ಕರೆ ಮಾಡಿದಾಗ ತಿಳಿಸಿದರು.
ಬಿಇಒ ಎದುರಲ್ಲೇ ಶಿಕ್ಷಕರಿಂದ ದಾಖಲೆಗಳ ತಪಾಸಣೆ:
— dcgkannada (@dcgkannada) September 21, 2024
ಕೊಕ್ಕೊ ಪಂದ್ಯಾವಳಿ-ಮೈಲೇಶ್ವರದ ಬ್ರಿಲಿಯಂಟ್ ಶಾಲೆಯದ್ದೇ ಗೆಲುವು pic.twitter.com/xEYbQzfS1h