ಮುದ್ದೇಬಿಹಾಳ : ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ(ದ್ಯಾಮವ್ವ ದೇವಿ) ಜಾತ್ರಾ ಮಹೋತ್ಸವ ಮೇ.30 ರಿಂದ ಜೂ.3ರವರೆಗೆ ನಡೆಯಲಿದ್ದು ನಾನಾ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಬಜಾರ್ ಹನುಮಾನ ದೇವಸ್ಥಾನದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದ ವಾಲ್ಪೋಸ್ಟರ್ ಹಾಗೂ ವಾಹನಗಳಿಗೆ ಅಂಟಿಸುವ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು. ಈ ವೇಳೆ ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ, ಜಾತ್ರೆಯನ್ನು ಎಲ್ಲರೂ ಒಗ್ಗೂಡಿ ಮಾಡೋಣ ಎಂದು ಹೇಳಿದರು.
ಜಾತ್ರೆಯಲ್ಲಿ ಏನಿದೆ ಏನಿಲ್ಲ : ಮೇ.30 ರಂದು ಗ್ರಾಮದೇವತೆ ಹಾಗೂ ಶಾರದಾ ದೇವಿ ಭವ್ಯ ಮೆರವಣಿಗೆ, ಸಂಜೆ 6.30ಕ್ಕೆ ಸಾಂಸ್ಕೃತಿಕ ಉತ್ಸವದ ಉದ್ಘಾಟನೆ ಲಕ್ಷ್ಮಿ ಚಿತ್ರಮಂದಿರದ ಎದುರಿಗೆ ಇರುವ ಬಿಡಿಓ ಕ್ವಾರ್ಟರ್ಸ್ ನಲ್ಲಿ ನಡೆಯಲಿದೆ. ರಾತ್ರಿ 11ಕ್ಕೆ ಸೈನಿಕ ಮೈದಾನದಲ್ಲಿ ವಾದಿ ಪ್ರತಿವಾದಿ ಡೊಳ್ಳಿನ ಹಾಡಿಕೆ ಕಾರ್ಯಕ್ರಮ ಜರುಗುವುದು.
ಮೇ.31 ರಂದು ಸೈನಿಕ ಮೈದಾನದಲ್ಲಿ ವಾದಿ ಪ್ರತಿವಾದಿ ಗೀಗೀ ಪದಗಳು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಅಂದು ಬೆಳಗ್ಗೆ 10 ಕ್ಕೆ ನಾಲತವಾಡ ರಸ್ತೆಯಲ್ಲಿ ಹೊಲದಲ್ಲಿ ಪುಟ್ಟಿಗಾಡಿ ಸ್ಪರ್ಧೆ, ಮದ್ಯಾಹ್ನ 2ಕ್ಕೆ ಎತ್ತಿನ ಕೂಡುಗಾಡಿಗಳ ಓಟದ ಸ್ಪರ್ಧೆ, ರಾತ್ರಿ 8ಕ್ಕೆ ಜಾನಪದ ಜಾತ್ರೆ ಬಿಡಿಓ ಕ್ವಾರ್ಟರ್ಸ್ ನಲ್ಲಿ ನಡೆಯಲಿದೆ.
ಜೂ.1 ರಂದು ಮದ್ಯಾಹ್ನ 12ಕ್ಕೆ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆ, ಮದ್ಯಾಹ್ನ 3ಕ್ಕೆ ಜಂಗೀ ನಿಕಾಲಿ ಕುಸ್ತಿಗಳು, ಸಂಜೆ 7ಕ್ಕೆ ಮದ್ದು ಸುಡುವ ಹಾಗೂ ಟ್ರ್ಯಾಕ್ಟರ್ ರಿವರ್ಸ್ ಸ್ಪರ್ಧೆ, ರಾತ್ರಿ 8ಕ್ಕೆ ನಗೆ ಹಬ್ಬ ನಡೆಯಲಿದೆ.
ಜೂ.2 ರಂದು ಬೆಳಗ್ಗೆ 10ಕ್ಕೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,10.15 ಕ್ಕೆ ಸ್ಲೋ ಬೈಕ್ ರೇಸ್ ಸ್ಪರ್ಧೆ,10.30ಕ್ಕೆ ಟಗರಿನ ಕಾಳಗ, ಮದ್ಯಾಹ್ನ 3ಕ್ಕೆ ಜಂಗೀ ನಿಕಾಲಿ ಕುಸ್ತಿಗಳು, ಸಂಜೆ 7.30ಕ್ಕೆ ಲೈವ್ ಸಂಗೀತ ರಸಮಂಜರಿ ಕಾರ್ಯಕ್ರಮ,8ಕ್ಕೆ ಜಾನಪದ ಜಾತ್ರೆ ನಡೆಯಲಿದೆ. ಜೂ.
3 ರಂದು ಬೆಳಗ್ಗೆ 9ಕ್ಕೆ ಭಾರ ಎತ್ತುವ ಸ್ಪರ್ಧೆ, ಮದ್ಯಾಹ್ನ 4ಕ್ಕೆ ಗ್ರಾಮದೇವತೆ, ಶಾರದಾ ದೇವಿಯರನ್ನು ಮೂಲಸ್ಥಳಕ್ಕೆ ಕರೆದೊಯ್ಯುವುದು. ರಾತ್ರಿ 8 ಗಂಟೆಗೆ ಸಂಗೀತ ರಸಮಂಜರಿ ನಡೆಯಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಗಭೂಮಿ ಕಲೆಗೆ ಕೊಕ್ : ಐದು ದಿನಗಳ ಜಾತ್ರೆಯಲ್ಲಿ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಾತ್ರಾ ಕಮಿಟಿಯವರು ಸಾಂಪ್ರದಾಯಿಕ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸದೇ ಇರುವುದು ರಂಗಭೂಮಿ ಕಲಾವಿದರ ಬೇಸರಕ್ಕೆ ಕಾರಣವಾಗಿದೆ. ಸ್ಥಳೀಯ ತಾಳಿಕೋಟಿಯ ರಾಜು ತಾಳಿಕೋಟೆ, ನಾಲತವಾಡದ ಸಿದ್ದು ಹಂಪನಗೌಡರ ಅವರ ನಾಟಕ ಕಂಪನಿಗಳಿದ್ದರೂ ಕಮೀಟಿಯವರು ನಾಲ್ಕು ದಿನಗಳ ಕಾಲ ಟಿವಿ ಕಲಾವಿದರ ಪ್ರದರ್ಶನಕ್ಕೆ ಒತ್ತು ನೀಡಿರುವುದು ನಾಟಕ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಸಾಮಾಜಿಕ, ಭಕ್ತಿ ಪ್ರದಾನ ನಾಟಕ ಪ್ರದರ್ಶನಕ್ಕೆ ಆದ್ಯತೆ ನೀಡಬೇಕಿತ್ತು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.