ಮುದ್ದೇಬಿಹಾಳ : ಅಂಗನವಾಡಿ ನೌಕರರ ಸಂಘಟನೆಯವರು ತಮ್ಮ ವಿರುದ್ಧ ಮಂಗಳವಾರ ಮಾಡಿದ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಸಿಡಿಪಿಒ ಶಿವಮೂರ್ತಿ ಕುಂಬಾರ ಅವರು, ಅಂಗನವಾಡಿ ನೌಕರರ ಸಂಘದ ಹೆಸರಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಗೆ ಇಲಾಖೆಯ ಅನುಮತಿ ಕೊಟ್ಟಿಲ್ಲ.ಮೇಲಾಗಿ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಆಧಾರ ರಹಿತವಾಗಿವೆ ಎಂದು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.ನನ್ನ ಮೇಲೆ ಎಲ್ಲೂ ಕಪ್ಪುಚುಕ್ಕೆ ಇಲ್ಲ. ತಾಳಿಕೋಟಿ ಭಾಗದಲ್ಲಿ 13 ಅಂಗನವಾಡಿಗಳನ್ನು ಅವರು (ನೀಲಮ್ಮ ಬೋರಾವತ್) ನೋಡಿಕೊಳ್ಳುತ್ತಿದ್ದರು. ಆ ಕೇಂದ್ರಗಳಿಗೆ ಸಂಬಂಧಿಸಿದ 13 ಮೊಬೈಲ್ ಅವರ ಬಳಿಯೇ ಇರುತ್ತಿದ್ದವು. ಆ 13 ಅಂಗನವಾಡಿಯ ಆಹಾರವನ್ನು ಅವರೇ ಇಳಿಸಿಕೊಳ್ಳುತ್ತಿದ್ದರು.
ಈ ಬಗ್ಗೆ ತನಿಖೆ ನಡೆಸಲು ಮುಂದಾಗಿರುವುದು ಹಾಗೂ ಮುದ್ದೇಬಿಹಾಳದ ಅಂಗನವಾಡಿ ಕಾರ್ಯಕರ್ತೆಯ ವರ್ಗಾವಣೆ ವಿಷಯದಲ್ಲಿ ಮೂರು ಲಕ್ಷ ರೂ.ಬೇಡಿಕೆ ಇಟ್ಟಿದ್ದು ಅದರಲ್ಲಿ 1.12 ಲಕ್ಷ ರೂ. ಅಡ್ವಾನ್ಸ್ ಪಡೆದುಕೊಂಡಿದ್ದಾಗಿ ನಮಗೆ ಲಿಖಿತ ಪತ್ರವನ್ನು ಕಾರ್ಯಕರ್ತೆ ರೇಣುಕಾ ಲಮಾಣಿ ಕೊಟ್ಟಿದ್ದಾರೆ ಇದರ ಬಗ್ಗೆ ತನಿಖೆಗೆ ಮುಂದಾದಾಗ ಅವರು ಕಾರ್ಯಕರ್ತೆಯರನ್ನು ಎತ್ತಿ ಕಟ್ಟಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಇಲಾಖೆಯ ನಿಯಮಗಳಂತೆ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ.ನನಗೆ ಹಣದ ಆಮಿಷವನ್ನೂ ಒಡ್ಡಿದ್ದರು.ಅದಕ್ಕೆ ಬಗ್ಗದಿದ್ದಾಗ ಈ ರೀತಿ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ನನಗೆ 22 ವರ್ಷದ ಮಗಳಿದ್ದಾಳೆ. ಅಂತಹ ಸ್ವಭಾವ ನನ್ನದಲ್ಲ. ನಾನು ದೇಶದ ಗಡಿಯಲ್ಲಿ 22 ವರ್ಷ ಸೇವೆ ಸಲ್ಲಿಸಿ ಬಂದಿದ್ದೇನೆ. ಅಂಗನವಾಡಿ ಸಂಘಟನೆಯವರು ಕೊಟ್ಟಿರುವ ಮನವಿಯ ಅಂಶಗಳಲ್ಲಿ ಸತ್ಯವಾಗಿದ್ದರೆ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಕುಂಬಾರ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.