ಮುದ್ದೇಬಿಹಾಳ(ಜಿಲ್ಲೆ : ವಿಜಯಪುರ) : ದೇಶದ ಪ್ರತಿಷ್ಠಿತ ಐಐಟಿ ಕಾಲೇಜುಗಳಲ್ಲಿ ಒಂದಾಗಿರುವ ಕಾನ್ಪುರದ ಐಐಟಿ ಕಾಲೇಜಿಗೆ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅದಿತಿ ಸವಣೂರ ಆಯ್ಕೆಯಾಗಿದ್ದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಎಂ.ಪಾಟೀಲ್ ತಿಳಿಸಿದರು.
ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಸಂಸ್ಥೆಯಿoದ 6-8 ವಿದ್ಯಾರ್ಥಿಗಳು ಪ್ರತಿಷ್ಠಿತ ಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡಿದ್ದು ಅದರಲ್ಲಿ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಶೋಷಿತ ಸಮುದಾಯದಿಂದ ಬಂದಿರುವ ವಿದ್ಯಾರ್ಥಿನಿ ಅದಿತಿ ಪ್ರತಿಭಾವಂತೆಯಾಗಿದ್ದು ನಮ್ಮ ವಿದ್ಯಾಸಂಸ್ಥೆಯಲ್ಲಿ ಎರಡು ವರ್ಷದ ಪಿಯು ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗಿತ್ತು.ಈಗ ಐಐಟಿ ತರಬೇತಿ ಪಡೆದು ಕಾನ್ಪುರದ ಕಾಲೇಜಿಗೆ ಆಯ್ಕೆಯಾಗಿದ್ದಾಳೆ ಎಂದು ಹೇಳಿದರು.
ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲರ ಮಾರ್ಗದರ್ಶನದ ಮೇರೆಗೆ ವಿದ್ಯಾರ್ಥಿನಿಗೆ ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿತ್ತು.ಐಐಟಿ ಓದಲು ಆಕೆಗೆ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಪ್ರತಿ ವರ್ಷ ಒಂದು ಲಕ್ಷ ರೂ.ಸ್ಕಾಲರ್ಶಿಪ್ ದೊರೆಯುವ ವ್ಯವಸ್ಥೆ ಸಂಸ್ಥೆ ಮಾಡಿದೆ.ನಮ್ಮ ವಿದ್ಯಾಸಂಸ್ಥೆಯಿoದ ಆಕೆಗೆ 50 ಸಾವಿರ ರೂ.ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದ್ದೇವೆ ಎಂದು ಹೇಳಿದರು.
ಪಿಯು ಕಾಲೇಜಿನ ಪ್ರಾಚಾರ್ಯ ರೇವಣಸಿದ್ದ ಚಲವಾದಿ(ಮುರಾಳ) ಮಾತನಾಡಿ, ವಿದ್ಯಾರ್ಥಿನಿ ಅದಿತಿ ಸವಣೂರ ಪ್ರತಿಭೆ ಗುರುತಿಸಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಆಕೆಗೆ ಭವಿಷ್ಯದ ಕನಸಿಗೆ ಆಸರೆಯಾಗಿ ನಿಂತಿದೆ.ಸoಸ್ಥೆಯ ಅಧ್ಯಕ್ಷರಾದ ಎಂ.ಎಸ್.ಪಾಟೀಲ,ಆಡಳಿತಾಧಿಕಾರಿಗಳಾದ ಅಮಿತಗೌಡ ಪಾಟೀಲ , ಆಡಳಿತ ಮಂಡಳಿಯವರ ಪ್ರೋತ್ಸಾಹದಿಂದ ಉನ್ನತ ಮಟ್ಟದ ವಿದ್ಯಾಸಂಸ್ಥೆಯಲ್ಲಿ ಓದುವಂತಾಗಿರುವುದು ಖುಷಿ ತರಿಸಿದೆ ಎಂದು ಹೇಳಿದರು.
ವಿದ್ಯಾರ್ಥಿನಿ ಅದಿತಿ ನೀಲಕಂಠಪ್ಪ ಸವಣೂರ ಮಾತನಾಡಿ, ನನಗೆ ಎರಡು ವರ್ಷಗಳ ಕಾಲ ಉಚಿತ ಶಿಕ್ಷಣವನ್ನು ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಿoದ ನೀಡಿದ್ದಾರೆ.ನಾನು ಎಸ್ಸಿ ಜಾತಿಯವಳಾಗಿದ್ದರೂ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲರು ನನ್ನನ್ನು ತಮ್ಮ ಮಗಳಂತೆ ನೋಡಿಕೊಂಡಿದ್ದಾರೆ.ಯಾವುದೇ ಜಾತಿ ಬೇಧಭಾವ ಮಾಡಿಲ್ಲ.ನನ್ನ ಸಹೋದರನೂ ಸಂಸ್ಥೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಿ ಉಚಿತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾನೆ ಎಂದು ಹೇಳಿದಳು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಸಿ.ಬಿ.ದೇಸಾಯಿ, ಮಾರ್ಗದರ್ಶಕರಾದ ಎನ್.ಎ.ಬಿರಾಜದಾರ,ಕಾರ್ಯದರ್ಶಿ ವಿಜಯಕುಮಾರ ಪಾಟೀಲ,ಮುಖ್ಯಗುರುಗಳಾದ ಇಸ್ಮಾಯಿಲ್ ಮನಿಯಾರ,ರಾಜಶೇಖರ ಹಿರೇಮಠ ಮೊದಲಾದವರು ಇದ್ದರು.
ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಒಳ್ಳೆಯ ಜವಾರಿ ಊಟವನ್ನೇ ಕೊಡುತ್ತಾರೆ.ಕಾಳುಪಲ್ಯೆ,ರೊಟ್ಟಿಯಂತಹ ಆಹಾರ ಇಂದಿನವರಿಗೆ ಹಿಡಿಸಲಿಕ್ಕಿಲ್ಲ.ಆದರೆ ಕೊಡುವ ಊಟ ಒಳ್ಳೆಯದಾಗಿದೆ.ಇಂದಿನವರಿಗೆ ಜಂಕ್ ಫುಡ್ ಇಷ್ಟವಾಗುತ್ತದೆ.ಆದರೆ ಊಟದ ವಿಷಯದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆಯಿoದ ಒಳ್ಳೆಯ ಊಟ ಕೊಡುತ್ತಾರೆ.
–ಅದಿತಿ ಸವಣೂರ,ಕಾನ್ಪುರ ಐಐಟಿಗೆ ಆಯ್ಕೆಯಾದ ವಿದ್ಯಾರ್ಥಿನಿ







