ಮುದ್ದೇಬಿಹಾಳ : ಆರೋಗ್ಯ ಇಲಾಖೆಯಲ್ಲಿ ಪದವೀಧರ ಆರೋಗ್ಯ ನಿರೀಕ್ಷಣಾಧಿಕಾರಿಗಳು (ಬಿಎಚ್ಇಓ) ಹಾಗೂ ಪದವೀಧರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ((PHCO)) ಹುದ್ದೆಗಳಿಂದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳ (BHEO) ಹುದ್ದೆಗೆ ನೀಡಬೇಕಿರುವ ಪದೋನ್ನತಿಯನ್ನು ವಿಳಂಬ ಮಾಡದೆ ಶೀಘ್ರವಾಗಿ ನೀಡುವಂತೆ ಒತ್ತಾಯಿಸಿ,(BHEO) ಹುದ್ದೆಯ ಆಕಾಂಕ್ಷಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ರಜನಿ ಎಂ. ಅವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪದವೀಧರ ((PHCO)) ಹಾಗೂ (BHEO)ಗಳು ಆರೋಗ್ಯ ಸಚಿವರ ಸರ್ಕಾರಿ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಮುದ್ದೇಬಿಹಾಳ ತಾಲೂಕ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಎಸ್.ಗೌಡರ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಸುಮಾರು 20ರಿಂದ 25 ವರ್ಷಗಳವರೆಗೆ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಅಗತ್ಯ ವಿದ್ಯಾರ್ಹತೆ ಮತ್ತು ಸೇವಾ ಅರ್ಹತೆ ಹೊಂದಿರುವವರಿಗೆ ಇದುವರೆಗೆ ಸೂಕ್ತ ಪದೋನ್ನತಿ ದೊರಕಿಲ್ಲ. ಆರೋಗ್ಯ ಇಲಾಖೆಯ ತಳಮಟ್ಟದ ಪ್ರಮುಖ ಸಿಬ್ಬಂದಿಯಾಗಿ, ಸರ್ಕಾರದ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ನಿರಂತರವಾಗಿ ನಿರ್ವಹಿಸುತ್ತಿದ್ದೇವೆ. ಇಲಾಖೆಯ ವಿವಿಧ ವೃಂದಗಳಿಗೆ ಈಗಾಗಲೇ ಪದೋನ್ನತಿ ಪ್ರಕ್ರಿಯೆ ನಡೆಯುತ್ತಿದ್ದು,(BHEO ಹುದ್ದೆಗೂ ಶೀಘ್ರವಾಗಿ ಪದೋನ್ನತಿ ನೀಡಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಆಕಾಂಕ್ಷಿಗಳ ಬೇಡಿಕೆಗಳನ್ನು ಪರಿಶೀಲಿಸಿ, ನಿರ್ದೇಶಕರೊಂದಿಗೆ ಚರ್ಚಿಸಿ ಶೀಘ್ರವಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಇಲಾಖೆಯ ವಿವಿಧ ವೃಂದಗಳಿಗೆ ಪದೋನ್ನತಿ ನೀಡುವ ಕಾರ್ಯವನ್ನು ವೇಗವಾಗಿ ಕೈಗೊಳ್ಳಲಾಗುತ್ತಿದ್ದು,(BHEO) ಹುದ್ದೆಯ ಅರ್ಹರಿಗೂ ಪದೋನ್ನತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧಕ್ಕೆ ತೆರಳಿದ(BHEO) ಹುದ್ದೆಯ ಆಕಾಂಕ್ಷಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ರಜನಿ ಎಂ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಿರ್ದೇಶಕರಾದ ಡಾ.ರಜನಿ ಎಂ ಅವರು, ಪದವೀಧರ (PHCO)ಹಾಗೂ (BHEO) ಹುದ್ದೆಗೆ ಪದೋನ್ನತಿ ನೀಡುವ ಸಲುವಾಗಿ ಅಗತ್ಯ ದಾಖಲೆಗಳ ಪರಿಶೀಲನಾ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಆದಷ್ಟು ಶೀಘ್ರದಲ್ಲಿ ಯಾವುದೇ ವಿಳಂಬವಿಲ್ಲದೆ ಪದೋನ್ನತಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪದೋನ್ನತಿ ಆಕಾಂಕ್ಷಿಗಳಾದ ವಿಜಯಲಕ್ಷ್ಮಿ ಕುಲಕರ್ಣಿ, ಮಲ್ಲಮ್ಮ ಸಿ, ಸುಮನಕುಮಾರಿ ಕ್ರಾಸ್ತಾ, ಸರೋಜಿನಿ ಪಾಟೀಲ್, ದ್ರಾಕ್ಷಾಯಿಣಿ ಎಚ್.ಎನ್., ಗಿರಿಜಾಬಾಯಿ ಕುಪ್ಪಸ್ತ, ಸುಮಿತ್ರಾ ಹೊಂಬಳ, ಗೀತಾ ಕೊಡತೆ, ಎಸ್.ಎಸ್. ರೋಶನ ಜ್ಯೋತಿ, ಈ ಸುಶೀಲಾ, ಗೀತಾ, ಪದ್ಮಾವತಿ, ಮಧು, ಗಾಯತ್ರಿ, ತಿಪ್ಪೇಶಿ, ವೈ. ಮಂಜುನಾಥ್ ಮಂಗಳೂರು, ಈಶ್ವರ ಕೆ, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಎಚ್,ಟಿ,ಪರಮೇಶಿ, ಶೋಭರಾಣಿ ಎನ್. ಹಲವಾರು ವೃಂದ ಸಂಘದ ಪದಾಧಿಕಾರಿಗಳು ನೌಕರರು ಹಾಜರಿದ್ದರು.







