ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಟಿಎಪಿಸಿಎಂಎಸ್ನಲ್ಲಿ ತಮ್ಮ ಹಿಡಿತ ಸಡಿಲಗೊಂಡಿಲ್ಲ ಎಂಬ ಸಂದೇಶವನ್ನು ತಮ್ಮ ವಿರೋಧಿಗಳಿಗೆ ರವಾನಿಸಿದ್ದಾರೆ.
ಪಟ್ಟಣದ ಎಪಿಎಂಸಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಮನೋಹರ ಎಸ್.ಮೇಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಿದಾನಂದ ಎಂ. ಸೀತಿಮನಿ ಎರಡು ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆರ್.ಎನ್.ಆಳೂರ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಅಧ್ಯಕ್ಷ ಸ್ಥಾನಕ್ಕೆ ಮುತ್ತಣ್ಣ ಮುತ್ತಣ್ಣವರ ಸೂಚಕರಾಗಿ, ನೀಲಕಂಠಗೌಡ ಗೌಡರ ಅನುಮೋದಕರಾಗಿ ಸಹಿ ಮಾಡಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಬಗಲಿ ಸೂಚಕರಾಗಿ, ಗುರಣ್ಣ ಹತ್ತೂರ ಅನುಮೋದಕರಾಗಿ ಸಹಿ ಮಾಡಿದರು.
ನಿರ್ದೇಶಕರಾದ ಬಸವರಾಜ ಇಸ್ಲಾಂಪೂರ, ಸುರೇಶ ಹಳೇಮನಿ, ಮಲ್ಲನಗೌಡ ಬಿರಾದಾರ, ಗುರುಲಿಂಗಪ್ಪ ಹಡ್ಲಗೇರಿ, ವನಮಾಲಾ ಮೇಟಿ, ಮಲ್ಲಮ್ಮ ಪಾಟೀಲ ಇದ್ದರು.
ಚುನಾವಣಾ ಕಾರ್ಯಕ್ಕೆ ಸಹಾಯಕ ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಧಿಕಾರಿ ಸಂತೋಷ ಇಲಕಲ್, ವ್ಯವಸ್ಥಾಪಕ ವಿ.ಎಸ್.ಉತ್ನಾಳ, ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ, ಸಿಬ್ಬಂದಿ ಎಂ.ಎಂ.ಪಾಟೀಲ, ಎಸ್.ಬಿ.ಚಿನಿವಾರ, ಸವಿತಾ ಚೌಧರಿ ಕಾರ್ಯನಿರ್ವಹಿಸಿದರು.
ರಹಸ್ಯ ಬಿಟ್ಟುಕೊಡದ ನಾಡಗೌಡ : ಟಿಎಪಿಸಿಎಂಎಸ್ನಲ್ಲಿ ಅಧಿಕಾರ ಹಂಚಿಕೆ ಸೂತ್ರವೇನಾದರೂ ನಡೆದಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾಡಗೌಡರು, ಸದ್ಯಕ್ಕೆ ಅಧ್ಯಕ್ಷರಾಗಿ ಮೇಟಿ,ಉಪಾಧ್ಯಕ್ಷರಾಗಿ ಸೀತಿಮನಿ ಆಯ್ಕೆಯಾಗಿದ್ದಾರೆ. ಇವರು ಮುಂದುವರೆಯಲಿದ್ದಾರೆ.ಇವರು ಹೇಗೆ ಕೆಲಸ ಮಾಡಲಿದ್ದಾರೆ ಎಂಬುದನ್ನು ಗಮನಿಸುತ್ತೇವೆ. ಇದು ರಾಜಕಾರಣ, ಇಲ್ಲಿ ಏನು ನಡೆಯುತ್ತದೆ ಎಂದು ಹೇಳಲಾಗದು.ಒಪ್ಪಂದ ಸೂತ್ರದ ಕುರಿತು ಚರ್ಚೆ ನಡೆಸಿದ್ದೇವೆ.ಈಗಲೇ ಏನೂ ಹೇಳಲಾಗದು ಎಂದು ಅಧಿಕಾರ ಹಂಚಿಕೆ ಸೂತ್ರದ ರಹಸ್ಯವನ್ನು ನಾಡಗೌಡರು ಬಿಟ್ಟುಕೊಡಲಿಲ್ಲ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ. ಕೆ. ಬಿರಾದಾರ, ಕಾಂಗ್ರೆಸ್ ಮುಖಂಡ ಸಿ. ಬಿ. ಅಸ್ಕಿ ಮಾತನಾಡಿ, ಟಿಎಪಿಸಿಎಂಎಸ್ನಲ್ಲಿ ಶಾಸಕರ ನಿರ್ದೇಶನದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿತರ ಕೈಗೆ ಅಧಿಕಾರ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಅನುಕೂಲ ಒದಗಿಸುವ ಕಾರ್ಯ ಮಾಡಲಿ ಎಂದು ತಿಳಿಸಿದರು. ವಿಜಯೋತ್ಸವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮೇಟಿ, ಸೀತಿಮನಿ ಅಭಿಮಾನಿಗಳು ಇದ್ದರು.







