ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಅನುಭವಿ ಶಾಸಕ ರುದ್ರಪ್ಪ ಮಾ. ಲಮಾಣಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಹಾಗೂ ಬಂಜಾರಾ ಸಮಾಜದ ಮುಖಂಡರು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಲಮಾಣಿ ಮಾತನಾಡಿ, ರುದ್ರಪ್ಪ ಲಮಾಣಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಉಪಸಭಾಪತಿಯಾಗಿ ಹಾಗೂ ಜವಳಿ ಮತ್ತು ಮುಜರಾಯಿ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸುಮಾರು 45 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಬಂಜಾರ ಸಮುದಾಯಕ್ಕೆ ಈ ಬಾರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಹಾವೇರಿ ಕ್ಷೇತ್ರದ ಹಿರಿಯ ನಾಯಕರಾದ ರುದ್ರಪ್ಪ ಲಮಾಣಿ ಅವರು ಈ ಹಿಂದೆ ಸಚಿವರಾಗಿ, ಪ್ರಸ್ತುತ ಉಪಸಭಾಪತಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಮುದಾಯದ ಏಕೈಕ ಪ್ರಭಾವಿ ಹಿರಿಯ ನಾಯಕರಾಗಿರುವ ಕಾರಣ ಇವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ವರಿಷ್ಠರಿಗೆ ಒತ್ತಾಯಿಸುವುದಾಗಿ ಹೇಳಿದರು.
ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಬಹಾದ್ದೂರ ರಾಠೋಡ, ಪಂಚ ಗ್ಯಾರಂಟಿ ಸಮೀತಿ ತಾಲ್ಲೂಕು ಉಪಾಧ್ಯಕ್ಷ ಲಕ್ಷö್ಮಣ ಲಮಾಣಿ ಮಾತನಾಡಿ, ಬ್ಯಾಡಗಿ ಕ್ಷೇತ್ರದಿಂದ ಒಂದು ಬಾರಿ ಹಾಗೂ ಹಾವೇರಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಜನಸೇವೆ ಸಲ್ಲಿಸಿರುವ ಲಮಾಣಿ ಅವರಿಗೆ ಈ ಬಾರಿ ಸಚಿವ ಸ್ಥಾನ ದೊರೆಯದಿರುವುದು ಸಮಾಜದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರವು ಅವರ ಅನುಭವ ಮತ್ತು ಸೇವೆಯನ್ನು ಗುರುತಿಸಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಮಾಜಿ ಸದಸ್ಯ ಥಾವರಪ್ಪ ಜಾಧವ ಮಾತನಾಡಿ,ರುದ್ರಪ್ಪ ಲಮಾಣಿ ಅವರ ರಾಜಕೀಯ ಅನುಭವವನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ,ರಾಹುಲ್ ಗಾಂಧಿ,ಮಾಜಿ ಸಿಎಂ ಸಿದ್ಧರಾಮಯ್ಯನವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಪಕ್ಷದ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಮಾಜದ ಮುಖಂಡರಾದ ಚಂದ್ರನಾಥ ಮೇಲ್ಮನಿ,ಗುತ್ತಿಗೆದಾರ ಚಂದ್ರಶೇಖರ ರಾಠೋಡ,ಮಾನಸಿಂಗ ಜಾಧವ, ಲಕ್ಷ್ಮಣ ರಾಠೋಡ, ನಾಮದೇವ ರಾಠೋಡ ಸೇರಿದಂತೆ ಹಲವರು ಇದ್ದರು.







