ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನಿಂದ ಕಾಂಗ್ರೆಸ್ ಪಕ್ಷದ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ತೆರಳಿದ ನಿಯೋಗವು ಖರ್ಗೆ ಅವರನ್ನು ಭೇಟಿಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ನಿಯೋಗದ ಉಸ್ತುವಾರಿ ವಹಿಸಿದ್ದ ವಾಯ್.ಎಚ್.ವಿಜಯಕರ್ ಸೇರಿದಂತೆ ಹಲವು ಮುಖಂಡರು, ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಕಳೆದ 40 ವರ್ಷದ ರಾಜಕಾರಣದಲ್ಲಿ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಶಾಸಕರಲ್ಲಿ ಅತ್ಯಂತ ಹಿರಿಯ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ದಾಂತಗಳಿಗೆ ಬದ್ದರಾಗಿ ಪಕ್ಷ ಸಂಘಟನೆಯಲ್ಲಿ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಕ್ಯಾಬಿನೇಟ್ ದರ್ಜೆಯ ಸಚಿವ ಸ್ಥಾನಮಾನ ನೀಡಬೇಕೆಂದು ಖರ್ಗೆ ಅವರಿಗೆ ಮನವಿ ಮಾಡಿದರು.
ಖರ್ಗೆ ಕಾಲಿಗೆರಗಿ ಬೇಡಿಕೊಂಡ ವಿಜಯಕರ; ನಿಯೋಗದೊಂದಿಗೆ ತೆರಳಿದ ಏಪಿಎಂಸಿ ಮಾಜಿ ಉಪಾಧ್ಯಕ್ಷ ವಾಯ್.ಎಚ್.ವಿಜಯಕರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೆರಗಿ ಈ ಬಾರಿ ಶಾಸಕ ನಾಡಗೌಡರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿ ಲಕ್ಷಾಂತರ ಅಭಿಮಾನಿ ಕಾರ್ಯಕರ್ತರ ಆಸೆಯನ್ನು ಈಡೇರಿಸಬೇಕೆಂದು ವಿನಂತಿಸಿಕೊAಡರು.ಈ ಸನ್ನಿವೇಶಕ್ಕೆ ಕರಗಿದ ಖರ್ಗೆ ಅವರು ಮೌನಮುರಿದು ಕಾರ್ಯಕರ್ತರೊಂದಿಗೆ ಎರಡು ಮಾತನಾಡಿದರು.
ಗಮನ ಸೆಳೆದ ಗಾಂಧಿ ಟೋಪಿ:
ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬೆಂಗಳೂರಿಗೆ ತೆರಳಿದ್ದ ನಿಯೋಗದ ನೂರಾರು ಕಾರ್ಯಕರ್ತರು ಗಾಂಧಿ ಟೋಪಿಗಳು ಗಮನ ಸೆಳೆದವು.ವಿಶೇಷವಾಗಿ ಮುದ್ದೇಬಿಹಾಳ ಕ್ಷೇತ್ರದ ಕಾರ್ಯಕರ್ತರ ಶಿಸ್ತಿಗೆ ಸಿಎಂ ಕಚೇರಿಯಿಂದಲೂ ವಿಶೇಷ ಗೌರವ ಸಿಕ್ಕಿತು ಎಂದು ಮೂಲಗಳು ತಿಳಿಸಿವೆ.







