ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡರ ಶಿಫಾರಸ್ಸಿನ ಮೇರೆಗೆ ಮುದ್ದೇಬಿಹಾಳ ಹಾಗೂ ನಾಲತವಾಡ ಸಾರ್ವಜನಿಕ ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.
ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾಗಿ ಪ್ರಭಾರ ಅಧಿಕಾರದಲ್ಲಿದ್ದ ಚಿಕ್ಕ ಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ಅವರನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಡಳಿತ ಪ್ರಭಾರ ಹುದ್ದೆಗೆ ವರ್ಗಾಯಿಸಿದ್ದು ಅಲ್ಲಿ ಪ್ರಭಾರ ಹುದ್ದೆಯಲ್ಲಿದ್ದ ಪ್ರಸೂತಿ ತಜ್ಞ ವೈದ್ಯ ಡಾ.ರಂಗನಾಥ ವೈದ್ಯ ಅವರನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ಒದಗಿಸುವ ಮೂಲಕ ರಾಜ್ಯಮಟ್ಟದಲ್ಲಿ ಎರಡು ಬಾರಿ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿದ್ದ ಡಾ.ವೈದ್ಯ ಅವರಿಗೆ ಮುದ್ದೇಬಿಹಾಳ ಆಸ್ಪತ್ರೆಯ ಆಡಳಿತ ಪ್ರಭಾರ ವಹಿಸಿದ್ದು ಸರ್ಕಾರಿ ಆಸ್ಪತ್ರೆಯ ಹಲವು ಅವ್ಯವಸ್ಥೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ನೂತನ ಪ್ರಭಾರ ಆಡಳಿತ ವೈದ್ಯಾಧಿಕಾರಿ ರಂಗನಾಥ್ ಅವರು ಶ್ರಮಿಸಬೇಕಿದೆ.
ಅಂತೆಯೇ ಮುದ್ದೇಬಿಹಾಳ ಆಸ್ಪತ್ರೆಯಲ್ಲಿ ತಮಗೆ ದೊರೆತ ಅಲ್ಪ ಅವಧಿಯಲ್ಲಿಯೇ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡ ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ.ಪರಶುರಾಮ ವಡ್ಡರ ಅವರನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾಗಿ ವರ್ಗಾವಣೆ ಮಾಡಿದ್ದು ಸುಧಾರಣೆಯ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.







