ಮುದ್ದೇಬಿಹಾಳ : ಪ್ರಸ್ತುತ ಬಾಗಲಕೋಟ ತಾಪಂ ಅಧೀಕ್ಷಕಿಯಾಗಿ ಸೇವೆಯಲ್ಲಿರುವ ಹಿಂದಿನ ಮುದ್ದೇಬಿಹಾಳ ತಾಲ್ಲೂಕು ಯರಝರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ವೇಳೆ ಅನುದಾನ ದುರುಪಯೋಗದ ಆರೋಪದ ಮೇಲೆ ಅಧಿಕಾರಿ ವಿಜಯಾ ಮುದಗಲ್ ಅವರನ್ನು ಅಮಾನತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ ಆದೇಶಿಸಿದ್ದಾರೆ.
ಪ್ರಕರಣವೇನು : ಸನ್ 2019-20 ರಿಂದ 2021-22ನೇ ಅವಧಿಯ ಯರಝರಿ ಗ್ರಾಮ ಪಂಚಾಯಿತಿ ವಿಜಯಪುರ ಜಿಲ್ಲೆಯಲ್ಲಿ ಎಸ್.ಸಿ/ಎಸ್ಟಿ ಜನಾಂಗದ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನ 7,77,769 ರೂ. ಹಾಗೂ ವಿಶೇಷ ಚೇತನರ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನ 4,86,747 ರೂ.ಬಳಕೆ ಮಾಡುವಲ್ಲಿ ವಿಫಲರಾಗಿದ್ದು ಇವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಒಟ್ಟು 16,84,184 ರೂ. ಮತ್ತು ವರ್ಗ-1 ರಲ್ಲಿ ಒಟ್ಟು 32,931 ರೂ.ಒಟ್ಟಾರೆಯಾಗಿ 17,17,115 ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಾಪಂ ಇಒ ಮುದ್ದೇಬಿಹಾಳ ಇವರು ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುದಗಲ್ ಅವರನ್ನು ಆರ್ಡಿಪಿಆರ್ ಇಲಾಖೆಯ ಆಯುಕ್ತೆ ಅರುಂಧತಿ ಅಮಾನತುಗೊಳಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ನ್ಯಾಯಕ್ಕೆ ಸಿಕ್ಕ ಜಯ : ಈ ಕುರಿತು ಪ್ರತಿಕ್ರಿಯಿಸಿರುವ ಕಂದಗನೂರ ಗ್ರಾಮದ ವಿಕಲಚೇತನ ಒಕ್ಕೂಟದ ಮುಖಂಡ ರಾಜಭಕ್ಷ ಮೊಕಾಶಿ, ಪಿಡಿಒ ಅವರು ಅನುದಾನ ದುರ್ಬಳಕೆ ಮಾಡಿಕೊಂಡಿರುವ ಕುರಿತು ಮೇಲಧಿಕಾರಿಗಳಿಗೆ ಸಾಕ್ಷಾö್ಯಧಾರಗಳ ಸಮೇತ ದೂರು ಸಲ್ಲಿಸಿದ್ದೇವು.ಅಧಿಕಾರಿ ವರ್ಗಾವಣೆ ಆಗಿದ್ದರೂ ಸರ್ಕಾರದಿಂದ ಅಮಾನತುಗೊಳಿಸಿರುವುದನ್ನು ನಾವು ಸ್ವಾಗತಿಸುತ್ತೇವೆ.ಸರ್ಕಾರ ಅಮಾನತುಗೊಳಿಸಿದರೆ ಸಾಲದು ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರಲ್ಲದೇ ಇದು ನ್ಯಾಯಕ್ಕೆ ಸಿಕ್ಕ ಜಯ ಎಂದು ತಿಳಿಸಿದ್ದಾರೆ.







