ಮುದ್ದೇಬಿಹಾಳ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಹತ್ತು ವರ್ಷದ ಬಾಲಕನೋರ್ವನ ಕಣ್ಣುಗಳನ್ನು ದಾನ ಮಾಡುವ ಮೂಲಕ ಆತನ ಕುಟುಂಬವು ಸಾವಿನಲ್ಲೂ ಸಾರ್ಥಕತೆ ಮೆರೆದ ಮಾನವೀಯ ಘಟನೆ ನಗರದ ಬಿ.ಎಲ್.ಡಿ.ಇ (ಬಿಎಂ ಪಾಟೀಲ) ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.
ಮುದ್ದೇಬಿಹಾಳ ತಾಲ್ಲೂಕಿನ ಮಲ್ಲಪ್ಪ ಹರಿಜನ ಹಾಗೂ ಸುಜಾತಾ ದಂಪತಿಯ ಏಕೈಕ ಪುತ್ರ ಆಕಾಶ ಹರಿಜನ (10) ಕಳೆದ ಮಾರ್ಚ್ 22ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಬಾಲಕನನ್ನು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕನ ಮೆದುಳು ನಿಷ್ಕಿçಯಗೊಂಡಿತ್ತು.ಕುಟುಂಬದ ಉದಾತ್ತ ನಿರ್ಧಾರ : ಮಗನ ಮೆದುಳು ನಿಷ್ಕ್ರಿಯಗೊಂಡ ಸುದ್ದಿ ತಿಳಿದ ಪೋಷಕರು, ದುಃಖದ ನಡುವೆಯೂ ಅಂಗಾOಗ ದಾನ ಮಾಡಲು ಮುಂದೆ ಬಂದಿದ್ದರು.
ಇಂದು (ಮಾರ್ಚ್ 25) ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ, ‘ದೇಹ ಬೆಂಕಿಯಲ್ಲಿ ಸುಟ್ಟು ಹೋಗುವ ಬದಲು ಅಂಧರ ಬಾಳಿಗೆ ಬೆಳಕಾಗಲಿ” ಎಂಬ ಉದಾತ್ತ ಉದ್ದೇಶದಿಂದ ಪೋಷಕರು ನೇತ್ರದಾನ ಮಾಡಲು ನಿರ್ಧರಿಸಿ ಅದರಂತೆ ಬಾಲಕನ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದು ಢವಳಗಿ ಗ್ರಾಮ ಪಂಚಾಯ್ತಿ ನೌಕರ ಎಂ.ಕೆ,ಗುಡಿಮನಿ ತಿಳಿಸಿದರು.
ಮೃತ ಆಕಾಶ ತಂದೆಗೆ ಒಬ್ಬನೇ ಮಗನಾಗಿದ್ದು, ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.
ಗಣ್ಯರ ಸಂತಾಪ: ಬಾಲಕನ ಕುಟುಂಬದ ಈ ಮಹತ್ವದ ನಿರ್ಧಾರಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಮಂಡಳಿ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ, ಬಾಲಕನ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಸಂಚಾಲಕ ಪ್ರೀತು ದಶವಂತ ಪ್ರಾರ್ಥಿಸಿದರು







