ಜಾಬಲಾಪುರ: ಮಧ್ಯಪ್ರದೇಶದ ಬುರಹಾನಪುರ ಜಿಲ್ಲೆಯ ಕೆಲವು ಪ್ರಸಿದ್ಧ ಸ್ಮಾರಕಗಳು ತನಗೆ ಎಂದು ರಾಜ್ಯದ ವಕ್ಫ್ ಮಂಡಳಿ 11 ವರ್ಷಗಳ ಹಿಂದೆ ಹೊರಡಿಸಿದ್ದ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ. ಆ ಸ್ಥಳಗಳಿಂದ ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿದೆ.
ಪ್ರಕರಣದ ವಿಚಾರಣೆ ವೇಳೆ ವಕ್ಫ್ ಮಂಡಳಿಯ ವಕೀಲರ ವಿರುದ್ಧ ಹರಿಹಾಯ್ದ ನ್ಯಾಯಪೀಠ, ‘ತಾಜ್ ಮಹಲ್, ಕೆಂಪುಕೋಟೆಯನ್ನೂ ವಕ್ಫ್ ಆಸ್ತಿ ಎಂದು ಘೋಷಿಸಿಬಿಡಿ. ನಿಮಗೆ ಮನಸ್ಸಿಗೆ ಬಂದಾಗ ಯಾವುದೇ ಆಸ್ತಿ ನಮ್ಮದೆಂದು ಘೋಷಿಸಿ ಬಿಡುತ್ತೀರಿ. ನಾಳೆ ನೀವು ಇಡೀ ದೇಶ ವಕ್ಫ್ ಆಸ್ತಿ ಎನ್ನುತ್ತೀರಿ. ಆಗ ಏನು ಮಾಡುವುದು? ನೀವು ಘೋಷಣೆ ಮಾಡಿ ಆಸ್ತಿ ನಮ್ಮದು ಎನ್ನುತ್ತೀರಿ. ಹೀಗೆ ಮಾಡಲು ಬಿಡಲ್ಲ’ ಎಂದು ಕಿಡಿಕಾರಿತು.
ಬುರ್ನಾನಪುರ ಕಟ್ಟೀಯೊಳಗೆ ಇರುವ ಅರಮನೆ, ಶಾ ಶುಜಾ, ನಾಡಿರ್ಶಾ ಅವರ ಗೋರಿ ಹಾಗೂ ಬೀಬಿ ಸಾಹೀಬ್ ಮಸೀದಿ ತಮಗೆ ಸೇರಿದ್ದು ಎಂದು 2013ರ ಜುಲೈ 19ರಂದು ಮಧ್ಯಪ್ರದೇಶ ವಕ್ಫ್ ಮಂಡಳಿ ಆದೇಶ ಹೊರಡಿಸಿತ್ತು.
ಇದರ ವಿರುದ್ಧ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸ್ಮಾರಕಗಳು ಕೇಂದ್ರ ಸರ್ಕಾರದ ಆಸ್ತಿಯಾಗಿವೆ. 1904ರ ಪುರಾತನ ಸ್ಮಾರಕ ಸಂರಕ್ಷಣಾ ಕಾಯ್ದೆಯಡಿ ಇವನ್ನು ತಾನು ಸಂರಕ್ಷಣೆ ಮಾಡುತ್ತಿರುವುದಾಗಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಾದಿಸಿತ್ತು. ಈ ವಾದಕ್ಕೆ ಮನ್ನಣೆ ನೀಡಿರುವ ಹೈಕೋರ್ಟ್ ನ್ಯಾ। ಜಿ.ಎಸ್. ಆಹ್ಲುವಾಲಿಯಾ ನೇತೃತ್ವದ ಏಕಸದಸ್ಯ ಪೀಠ, ವಕ್ಫ್ ಮಂಡಳಿ ಆದೇಶವನ್ನು ರದ್ದುಗೊಳಿಸಿದೆ.
ಏತನ್ಮಧ್ಯೆ ಇಂದು ವಕ್ಫ್ ಬೋರ್ಡ್ ನ 40 ನಿಯಮಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮಸೂದೆ ಮಂಡಿಸಲಿದೆ.