ಮುದ್ದೇಬಿಹಾಳ : ಸಾಮೂಹಿಕ ವಿವಾಹಗಳು ಸಮಾಜಕ್ಕೆ ಮಾದರಿಯಾಗಿದ್ದು ಉಳ್ಳವರು ತಮ್ಮ ಮಕ್ಕಳ ಮದುವೆಗಳಲ್ಲಿ ಬಡವರ ಮದುವೆಗಳನ್ನು ಮಾಡಿಕೊಡುವ ಸಂಪ್ರದಾಯ ಆಚರಣೆಯಲ್ಲಿ ತರಬೇಕು ಎಂದು ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕು ಜಟ್ಟಗಿಯ ಬೆಳ್ಳೇಶ್ವರ ಜಾತ್ರೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಜಟ್ಟಗಿ ಬೆಳ್ಳೇಶ್ವರ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರೆ ದೇಣಿಗೆ ಸಂಗ್ರಹಿಸಿ ಇಂತಹ ಧಾರ್ಮಿಕ ಕಾರ್ಯ ನಡೆಸುತ್ತಿರುವುದು ಸಮಾಜದಲ್ಲಿರುವ ಉಳ್ಳವರಿಗೆ ಮಾದರಿಯಾಗಿದೆ ಎಂದರು.
ಜಾತ್ರಾ ಕಮೀಟಿ ಅಧ್ಯಕ್ಷ ಬಿ.ಕೆ.ಬಿರಾದಾರ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಮಾತನಾಡಿ, ನಾವು ಮಾಡುವ ಜಾತ್ರೆಗಳು ಮತ್ತೊಬ್ಬರಿಗೆ ಭಾರವಾಗದಂತೆ ಇರಬೇಕು. ಬಡವರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ರಮಗಳನ್ನು ಜಾತ್ರೆಯ ಕಾರ್ಯಕ್ರಮಗಳಲ್ಲಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ, ಗೊಳಸಾರಮಠದ ಅಭಿನವ ಪುಂಡಲೀಕ ಸ್ವಾಮೀಜಿ, ಸೀತಿಮನಿಯ ವೈಶಿಷ್ಟ ಸ್ವಾಮೀಜಿ, ಜಟ್ಟಗಿಯ ಸೋಮಲಿಂಗ ಸ್ವಾಮೀಜಿ, ಬಾಗಲಕೋಟೆ ಶಾಸಕ ಎಚ್.ವಾಯ್.ಮೇಟಿ, ಹುಲ್ಲೂರು ಗ್ರಾಪಂ ಅಧ್ಯಕ್ಷೆ ನೈನಾ ಚವ್ಹಾಣ, ಮಾಜಿ ಅಧ್ಯಕ್ಷ ಹಣಮಂತಗೌಡ ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷೆ ಚೆನ್ನಮ್ಮ ಗೌಡರ, ಗ್ರಾಪಂ ಸದಸ್ಯರಾದ ಭೀಮಪ್ಪ ಮಾದರ, ಶಿವಾನಂದ ಲಮಾಣಿ, ವಾಯ್. ಎಚ್. ವಿಜಯಕರ್, ಬಿ. ಎಚ್. ಶಿರೋಳ, ಕಿರಣ ಮದರಿ, ವಾಯ್. ಕೆ. ಹಳೇಮನಿ, ಎಂ. ಎಚ್. ಚನ್ನಿ ಮೊದಲಾದವರು ಇದ್ದರು. ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು.