ಮುದ್ದೇಬಿಹಾಳ : ಕಾಲುವೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ವಿಷಯದಲ್ಲಿ ಕೆಲವು ಮುಖಂಡರು ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ.ಅದಕ್ಕೆ ರೈತರು ಕಿವಿಗೊಡಬಾರದು.ವಾರದಲ್ಲಿ ಕಾಲುವೆ ಮೂಲP ಕೆರೆಗಳನ್ನು ತುಂಬಿಸಲಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕೆರೆಗಳನ್ನು ತುಂಬಿಸಲು ವಿಳಂಬವಾಗಿದೆ.ನೀರು ಕೊಡಬಾರದು ಎಂಬ ಉದ್ದೇಶ ಸರ್ಕಾರಕ್ಕಾಗಲೀ,ಅಧಿಕಾರಿಗಳಿಗಾಗಲೀ ಇಲ್ಲ.ಬೇಸಿಗೆಯ ಸಮಯದಲ್ಲಿ ಕುಡಿವ ನೀರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.ನಾನು ಕೆಬಿಜೆಎನ್ಎಲ್ ಮುಖ್ಯ ಅಭಿಯಂತರರ ಜೊತೆಗೆ ಮಾತನಾಡಿದ್ದೇನೆ.ವಿದ್ಯುತ್ ಗೋಪುರವೊಂದರ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಒಂದು ವಾರಗಳ ಕಾಲ ನೀರು ಹರಿಸುವ ಕಾರ್ಯ ವಿಳಂಬವಾಗಿದೆ.ಅದನ್ನು ತಿಳಿದುಕೊಳ್ಳದೇ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಆಗಬಾರದು ಎಂದು ನಾಡಗೌಡರು ಹೇಳಿದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 2013 ರಿಂದ ಹಿಡಿದು ಈವರೆಗೂ ಕೇಂದ್ರ ಸರಕಾರ ಕೃಷ್ಣಾ ನದಿ ನೀರಿನ ಹಂಚಿಕೆಗೆ ನೋಟಿಫಿಕೇಶನ ಮಾಡುತ್ತಿಲ್ಲ.ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಆಗುತ್ತಿಲ್ಲ.ರೈತರ ಜಮೀನಿಗೆ ನೀರು ಹರಿಸಲು ಸಾಕಷ್ಟು ಸಿದ್ದತೆ ಮಾಡಿಕೊಂಡರೂ ರೈತರಿಗೆ ನೀರು ಕೊಡಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿಲ್ಲ.ಪ್ರಧಾನಿಯವರನ್ನು ನೀರಾವರಿ ಮಂತ್ರಿ,ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ ಭೇಟಿಯಾಗಿದ್ದಾರೆ.ಅವರು ನೋಟಿಫೀಕೇಶನ್ ಮಾಡುತ್ತಿಲ್ಲ ಎಂದು ದೂರಿದರು.
ಯಾವುದೇ ಕೆಲಸವಾಗಲೀ ನಾವು ಸಾಮೂಹಿಕವಾಗಿ ನಿರ್ಧಾರ ತಗೆದುಕೊಳ್ಳುತ್ತೇವೆ.ಪ್ರತಿಯೊಂದು ಕೆಲಸನ್ನು ಪ್ರಚಾರ ಮಾಡಿ ನಾವು ಮಾಡುವುದಿಲ್ಲ.ರೈತರು ಸಮಾಧಾನದಿಂದ ಇರಬೇಕು.ಕುಡಿಯುವುದಕ್ಕೆಂದು ನೀರು ಬಿಟ್ಟರೆ 5-10 ಎಚ್.ಪಿ ಮೋಟರ್ ಹಚ್ಚಿ ನೀರು ಜಮೀನಿಗೆ ಹೊಡೆದರೆ ಅಂತಹ ಮೋಟರ್ಗಳನ್ನು ಜಿಲ್ಲಾಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







