ಮುದ್ದೇಬಿಹಾಳ : ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ., ಇದರ ಆಡಳಿತ ಮಂಡಳಿಯ 12 ಜನ ನಿರ್ದೇಶಕರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ವಿಜಯಪುರ ಸಹಕಾರ ಅಭಿವೃದ್ಧಿ ಅಧಿಕಾರಿ ರವೀಂದ್ರ ಆಳೂರ ಫಲಿತಾಂಶ ಘೋಷಿಸಿದರು.
ಬ ವರ್ಗದ ಮತಕ್ಷೇತ್ರದಲ್ಲಿ ಸಾಮಾನ್ಯ ವರ್ಗದಿಂದ ಗುರುಲಿಂಗಪ್ಪ ಹಡಲಗೇರಿ(ಕೊಣ್ಣೂರ), ಬಸವರಾಜ ಬಗಲಿ(ತಮದಡ್ಡಿ), ಮಹಿಳಾ ವರ್ಗದಿಂದ ವನಮಾಲಾ ಮೇಟಿ(ಹಂದ್ರಾಳ), ಮಲ್ಲಮ್ಮ ಪಾಟೀಲ(ಗುಂಡಕರ್ಜಗಿ), ಹಿಂದುಳಿದ ಅ ವರ್ಗದಿಂದ ಮುತ್ತಪ್ಪ ಮುತ್ತಣ್ಣವರ(ಮಸೂತಿ), ಹಿಂದುಳಿದ ಬ ವರ್ಗದಿಂದ ಮನೋಹರ ಮೇಟಿ(ಬಸರಕೋಡ), ಪರಿಶಿಷ್ಟ ಜಾತಿ ವರ್ಗದಿಂದ ಚಿದಾನಂದ ಸೀತಿಮನಿ(ಕೋಳೂರ), ಎಸ್.ಟಿ ವರ್ಗದಿಂದ ಗುರಣ್ಣ ಹತ್ತೂರ(ಕೊಣ್ಣೂರ), ಅ ವರ್ಗದ ಸಂಘಗಳ ಮತಕ್ಷೇತ್ರದಿಂದ ತಂಗಡಗಿ ಪಿಕಪಿಎಸ್ನ ಬಸವರಾಜ ಇಸ್ಲಾಂಪೂರ, ಹುಲ್ಲೂರ ಪಿಕೆಪಿಎಸ್ನ ಸುರೇಶ ಹಳೇಮನಿ, ಗುಂಡಕನಾಳ ಪಿಕೆಪಿಎಸ್ನ ಮಲ್ಲನಗೌಡ ಬಿರಾದಾರ, ಢವಳಗಿ ಪಿಕೆಪಿಎಸ್ನಿಂದ ನೀಲಕಂಠಗೌಡ ಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಅ ವರ್ಗದಿಂದ 16 ಜನ ನಾಮಪತ್ರ ಸಲ್ಲಿಸಿದವರ ಪೈಕಿ 12 ಜನ ನಾಮಪತ್ರ ವಾಪಸ್ ಪಡೆದುಕೊಂಡರೆ, ಬ ವರ್ಗದಿಂದ 26 ಜನರಲ್ಲಿ 18 ಜನ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡರು ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಸಿ.ಎಸ್.ನಾಡಗೌಡ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಟಿಎಪಿಸಿಎಂಎಸ್ನಿಂದ, ಹಿರಿಯರು ಚುನಾವಣಾ ಕಣದಲ್ಲಿ ನನ್ನನ್ನು ಉಳಿಸಿ ಬೆಳೆಸಿದ್ದರಿಂದ ಜನಸೇವೆಗೆ ಮುಂದಾಗಿದ್ದೇನೆ. ಇದು ಕೃಷಿಕರ ಕ್ಷೇತ್ರವಾಗಿದ್ದು ಇಲ್ಲಿ ಆ ಪಕ್ಷ ಈ ಪಕ್ಷ ಎಂದು ರಾಜಕಾರಣ ಮಾಡುವುದಿಲ್ಲ. ಬಿಜೆಪಿಯ ಪ್ರಭುಗೌಡ ದೇಸಾಯಿ, ಆರ್.ಎಸ್.ಪಾಟೀಲ ಕೂಚಬಾಳ ಅವರ ಪಾತ್ರವೂ ಅವಿರೋಧ ಆಯ್ಕೆಯಲ್ಲಿ ಇದೆ. ಟಿಎಪಿಸಿಎಂಎಸ್ನಲ್ಲಿರುವುದು ಈಗ ಪಕ್ಕಾ ಕಾಂಗ್ರೆಸ್. ಕಾಂಗ್ರೆಸ್ ಎಂದರೆ ಎಲ್ಲ ಜಾತಿ, ಜನಾಂಗ, ಪಕ್ಷದವರನ್ನು ಜೊತೆಗೂಡಿ ಕರೆದುಕೊಂಡು ಹೋಗುವುದಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಸುರೇಶಗೌಡ ಪಾಟೀಲ ಇಂಗಳಗೇರಿ, ಶ್ರೀಶೈಲ ಮರೋಳ, ರಾಜುಗೌಡ ಕೊಂಗಿ, ಸಂತೋಷ ಚವ್ಹಾಣ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ, ಬಾಪುಗೌಡ ಪೀರಾಪೂರ, ಅಪ್ಪುಗೌಡ ನಾಡಗೌಡ ಸೇರಿದಂತೆ ಹಲವರು ಇದ್ದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಅಧಿಕಾರಿ ಸಂತೋಷ ಇಲಕಲ್, ಟಿಎಪಿಸಿಎಂಎಸ್ ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ ಇದ್ದರು.
ಫಲಿಸಿದ ನಾಡಗೌಡರ ರಣತಂತ್ರ: ಶಾಸಕ ಸಿ.ಎಸ್.ನಾಡಗೌಡ ಅವರು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮುಂಚೆ ಮಾಜಿ ಅಧ್ಯಕ್ಷ ಎಂ.ಎಸ್. ಮೇಟಿ ಅವರ ಹಿಡಿತದಲ್ಲಿದ್ದ ಟಿಎಪಿಸಿಎಂಎಸ್ ಆಡಳಿತದ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಈ ಬಾರಿ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.







