ಮುಂಬೈ: ದ್ವೀತಿಯಾರ್ಧದಲ್ಲಿ ಎರಡು ಬಾರಿ ಮಳೆ ಕಾಡಿದರೂ ಗುಜರಾತ್ ತಂಡ ಮುಂಬೈ ವಿರುದ್ಧ ರೋಚಕ ಜಯ ಗಳಿಸಿದೆ. ಎರಡು ಬಾರಿ ಮಳೆಯ ಆಡಚಣೆಯ ಹೊರತಾಗಿಯೂ ಕೊನೆಯವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಕಡಿಮೆ ಮೊತ್ತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಗುಜರಾತ್ ಟೈಟನ್ಸ್ ತಂಡ ಡಿಎಲ್ಎಸ್ ನಿಯಮದ ಪ್ರಕಾರ 3 ವಿಕೆಟ್ ಗೆಲುವು ಸಾಧಿಸಿತು.
ಮುಂಬೈನ ವಾಖಂಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಪಂದ್ಯ ಜರುಗಿತ್ತು. ಟಾಸ್ ಗೆದ್ದು ಗುಜರಾತ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಮುಂಬೈ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆ ಹಾಕಿತು. 156 ರನ್ ಗಳ ಗುರಿ ಬೆನ್ನತ್ತಿದ್ದ ಗುಜರಾತ್ ತಂಡ, ಸುಲಭವಾಗಿ ಗೆಲುವು ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಮುಂಬೈನ ಶಿಸ್ತುಬದ್ದ ದಾಳಿಯ ನಡುವೆಯೂ ಗುಜರಾತ್ ತಂಡ ರೋಚಕ ಜಯ ಸಾಧಿಸಿದೆ.
ಗುಜರಾತ್ ತಂಡ 18 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 132 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಗುಜರಾತ್ ಗೆ ಕೊನೆಯ 12 ಎಸೆತಗಳಲ್ಲಿ 24 ರನ್ ಅಗತ್ಯವಿತ್ತು. ಈ ವೇಳೆ ಎರಡನೇ ಬಾರಿ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಮಳೆ ನಿಂತ ಬಳಿಕ ಪಂದ್ಯವನ್ನು 19 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಆ ಮೂಲಕ ಕೊನೆಯ ಓವರ್ನಲ್ಲಿ ಗುಜರಾತ್ಗೆ 15 ರನ್ ಅಗತ್ಯವಿತ್ತು. ಕೊನೆಯ ಓವರ್ನಲ್ಲಿ ದೀಪಕ್ ಚಹರ್ಗೆ ರಾಹುಲ್ ತೆವಾಟಿಯಾ ಬೌಂಡರಿ ಸೇರಿ 5 ರನ್ ಗಳಿಸಿದರೆ, ಜೆರಾಲ್ಡ್ ಕೋಯೆಡ್ಜಿ ಸಿಕ್ಸರ್ ಬಾರಿಸಿದ್ದರು. ನಂತರ ಕೊನೆಯ ಎರಡು ಎಸೆತಗಳಲ್ಲಿ ಒಂದು ರನ್ ಬೇಕಿದ್ದಾಗ ಕೊಯೆಡ್ಜಿ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್ಗೆ ಬಂದಿದ್ದ ಅರ್ಷದ್ ಒಂದು ರನ್ ಗಳಿಸಿ ಗುಜರಾತ್ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಗುಜರಾತ್ 19 ಓವರ್ಗಳಿಗೆ 7 ವಿಕೆಟ್ ಕಳೆದುಕೊಂಡು 147 ರನ್ಗಳನ್ನು ಗಳಿಸಿ ಗೆದ್ದು ಬೀಗಿತು.