ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಆಗ್ರಹಿಸಿದರು.
ಪಟ್ಟಣದ ಮುದ್ದೇಬಿಹಾಳ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ(ಪಿಕಾರ್ಡ್)ದ ಬ್ಯಾಂಕ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 62ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 3 ವರ್ಷಗಳಿಂದ ನಮ್ಮ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಸತತ ಮೂರುಬಾರಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯದಲ್ಲಿ 6 ನೇ ಸ್ಥಾನದಲ್ಲಿದ್ದೇವೆ.ಕಳೆದ 62 ವರ್ಷಗಳಿಂದ ಬ್ಯಾಂಕು ಅನೇಕ ಬಾರಿ ಪ್ರಕೃತಿ ವಿಕೋಪ ಹಾಗೂ ನೆರೆ ಹಾವಳಿ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಸಹ ತಾಲೂಕಿನ ರೈತ ಬಾಂಧವರಿಗೆ ಭೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ತಾಲ್ಲೂಕಿನಲ್ಲಿ ಭೀಕರ ಬರಪರಿಸ್ಥಿತಿ ಇದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರು ಪಡೆದುಕೊಂಡಿರುವ ಸಾಲವನ್ನು ಕಟ್ಟಲಾಗದ ಪರಿಸ್ಥಿತಿಯಲ್ಲಿದ್ದು ಸರಕಾರ ರೈತರು ಪಡೆದ ಸಾಲ ಅಥವಾ ಸಾಲದ ಬಡ್ಡಿಯನ್ನಾದರೂ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಹಿರಿಯ ನಿರ್ದೇಶಕ ಮನೋಹರ ಮೇಟಿ ಮಾತನಾಡಿ, ಪಿಕಾರ್ಡ್ ಬ್ಯಾಂಕ್ ಸಾಮಾನ್ಯ ಸಭೆಯಲ್ಲಿ ರೈತರ ಮುಂದೆ ಪ್ರಸ್ತಾಪಿತವಾದ ವಿಷಯಗಳನ್ನೇ ಠರಾವಿನಲ್ಲಿ ನಮೂದಿಸಬೇಕು ಎಂದು ಬ್ಯಾಂಕ್ ಅಧ್ಯಕ್ಷರ ಗಮನಕ್ಕೆ ತಂದರು. ಪಿಕಾರ್ಡ್ ವ್ಯವಸ್ಥಾಪಕ ಎ.ಜಿ ಲಮಾಣಿ ವಾರ್ಷಿಕ ವರದಿ ವಾಚನ ಮಾಡಿದರು.
ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಿ.ಬಿ.ಕಮರಿ, ನಿರ್ದೇಶಕರಾದ ನೀಲಕಂಠರಾವ ಎಸ್ ದೇಶಮುಖ,ನಿಂಗಪ್ಪಗೌಡ ಬಪ್ಪರಗಿ, ಬಿ.ಸಿ ಬಗಲಿ, ಎಸ್.ಎಸ್.ಸೋಮನಾಳ, ಬಿ.ಜಿ ನರೂಡಿ, ಎ.ಬಿ ನಡಹಳ್ಳಿ, ಎಲ್. ಜೆ.ಪೂಜಾರಿ, ಆರ್.ಎಚ್.ಬಿರಾದಾರ, ಆರ್ .ಜಿ.ನಾಯಕ, ಸಿ.ಎಸ್. ಭಂಗಿ ವಿಜಯಪುರದ ಲೆಕ್ಕ ಪರಿಶೋಧಕ ಅಧಿಕಾರಿ ಕಿರಣ್ ಇನಾಮದಾರ ಸೇರಿದಂತೆ ಬ್ಯಾಂಕ್ ಶೇರುದಾರರು, ರೈತರು, ಸದಸ್ಯರು ಹಾಗೂ ಪಿಕಾರ್ಡ್ ಬ್ಯಾಂಕ್ ಸಿಬ್ಬಂದಿ ಇದ್ದರು.







