ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಅಂಜುಮನ್ ಕಮೀಟಿ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳೂ ಆಗಿರುವ ಡಾ.ಔದ್ರಾಮ್ ಅವರು ಜು.23 ರಂದು ಅಧಿಸೂಚನೆ ಹೊರಡಿಸಿದ್ದು ಚುನಾವಣೆ ಪ್ರಕ್ರಿಯೆ ಆರಂಭಗೊoಡಿದೆ.
ಜು.24 ರಿಂದ 30ರವರೆಗೆ ಬೆಳಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸ್ವೀಕಾರ,ಜು.31 ರಂದು ನಾಮಪತ್ರಗಳ ಪರಿಶೀಲನೆ,ಆ.1 ರಂದು ಬೆಳಗ್ಗೆ 11 ರಿಂದ ಮದ್ಯಾಹ್ನ 3ರವರೆಗೆ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯಲಿದೆ.
ಅಂದೇ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆ,ಆ.17 ರಂದು ಬೆಳಗ್ಗೆ 8 ಗಂಟೆಯಿAದ ಮದ್ಯಾಹ್ನ 3ರವರೆಗೆ ಮತದಾನ ನಡೆಯಲಿದೆ.ಅಂದೇ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತ ಎಣಿಕೆ ನಂತರ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದೇ ಅಂಜುಮನ್ ಕಮೀಟಿ ಆಡಳಿತ ಮಂಡಳಿ ಇಲ್ಲದೇ ಆಡಳಿತಾಧಿಕಾರಿಗಳ ಕೈಯ್ಯಲ್ಲಿ ಅಧಿಕಾರ ಇತ್ತು.ಇದೀಗ ಚುನಾವಣೆ ಘೋಷಣೆಯಾಗಿರುವುದು ಕಮೀಟಿಯ ಆಡಳಿತ ರಚನೆಗೊಂಡು ಸಮುದಾಯದ ಏಳ್ಗೆಗೆ ಬಲ ದೊರೆಯಬಹುದು ಎಂಬ ಲೆಕ್ಕಾಚಾರ ಮುಸ್ಲಿಂ ಸಮಾಜದ ಚಿಂತಕರದ್ದಾಗಿದೆ.







