ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾಗಲಕ್ಷ್ಮಿ ಚೌಧರಿ ಮಹಿಳೆಯರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದು ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ವಕೀಲ ಜಗದೀಶನ ನಾಲಿಗೆ ಕಟ್ ಮಾಡುವೆವು ಎಂದು ನಾಗಲಕ್ಷ್ಮಿ ಚೌಧರಿ ಅಭಿಮಾನಿ ಬಳಗದ ಸದಸ್ಯೆ ಶಿವಲೀಲಾ ಬಸರಕೋಡ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುತ್ತಾ ಸಮಾಜದಲ್ಲಿ ಮಹಿಳೆಯರು ನಾಲ್ಕು ಗೋಡೆಗಳನ್ನು ಬಿಟ್ಟು ಹೊರ ಬಂದು ದುಡಿಯುವುದಕ್ಕೆ ಧೈರ್ಯ ತುಂಬುತ್ತಿದ್ದಾರೆ. ಆದರೆ ಇಂತಹ ದಿಟ್ಟ ಹೋರಾಟಗಾರ್ತಿಯ ಕುರಿತು ವಕೀಲ ವೃತ್ತಿಯಲ್ಲಿದ್ದುಕೊಂಡು ಕೀಳುಮಟ್ಟದಲ್ಲಿ ಮಾತನಾಡಿರುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ಮಾದಿಗ ಮೀಸಲಾತಿ ಹೋರಾಟ ಸಮೀತಿ ತಾಲ್ಲೂಕು ಅಧ್ಯಕ್ಷ ತಿಪ್ಪಣ್ಣ ದೊಡಮನಿ, ಅಭಿಮಾನಿ ಬಳಗದ ಮುಖಂಡ ಮುತ್ತು ಟಕ್ಕಳಕಿ ಮಾತನಾಡಿ, ವಕೀಲ ಜಗದೀಶ ಇದೇ ರೀತಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು ಮುಂದುವರೆಸಿದ್ದಲ್ಲಿ ಅವರ ಮನೆಗೆ ಮುತ್ತಿಗೆ ಹಾಕುವುದಕ್ಕು ಹಿಂಜರಿಯುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲಲಿತಾ ಮುರಾಳ, ಮಾಳಿಂಗರಾಯ ಯರಝರಿ, ಹಣಮಗೌಡ ಗೌಡರ,ರೇಣುಕಾ ಚಲವಾದಿ, ಭವ್ಯ ಹಿಪ್ಪರಗಿ, ಲಕ್ಷ್ಮಿಬಾಯಿ ಇಂಗಳಗೇರಿ, ರಿಜಾದ ನದಾಫ, ಗೌರಮ್ಮ ಭೋವಿ, ಲೋಕೇಶ ಹಾವರಗಿ, ನಿಂಗು ಬಂಡೆಪ್ಪನಹಳ್ಳಿ, ಅನೀಲ ವಾಲೀಕಾರ ಇದ್ದರು.