ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ಮೇ.29 ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಳ್ಳಲಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳನ್ನು ಸ್ವಾಗತಿಸಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಪಟ್ಟಣದ ಏಪಿಎಂಸಿ ಯಾರ್ಡ್ ನಲ್ಲಿ ಶನಿವಾರ ಪೂರ್ವಭಾವಿ ಸಭೆಯೊಂದರಲ್ಲಿ ಪಾಲ್ಗೊಂಡು ನಿರ್ಗಮಿಸುವ ವೇಳೆ ತಮ್ಮನ್ನು ಎದುರಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಶಾಲೆಗಳಲ್ಲಿ ನೈತಿಕ ಶಿಕ್ಷಣ ನೀಡಬೇಕು ಎಂದು ಸೂಚಿಸಿದ್ದು ಆ ಬಗ್ಗೆ ಮೇಲ್ಮನೆಯಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಈ ವರ್ಷ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪಿಯುಸಿ ಹಂತದಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯವುಳ್ಳ ಶಿಕ್ಷಣ ನೀಡುವ ಉದ್ದೇಶದಿಂದ ನೀತಿ ವಿಜ್ಞಾನ ಬೋಧಿಸಲಾಗುವುದು ಎಂದು ತಿಳಿಸಿದರು.
ಶಾಲಾ ಆರಂಭೋತ್ಸವದ ದಿನದಂದೇ ಎಲ್ಲ ಮಕ್ಕಳಿಗೆ ಸಮವಸ್ತ್ರ ಪಠ್ಯಪುಸ್ತಕ ವಿತರಿಸಲಾಗುತ್ತದೆ. ಶೂ, ಸಾಕ್ಸ್ ಹಂತಹಂತವಾಗಿ ಶಾಲೆಯಲ್ಲಿ ವಿತರಿಸಲಾಗುತ್ತಿದೆ. ಅದಕ್ಕೂ ಒಂದು ಕಠಿಣ ಕಾನೂನು ರೂಪಿಸಿ ಶಾಲಾ ಆರಂಭದಲ್ಲೇ ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶೂನ್ಯ ಫಲಿತಾಂಶ ಬಂದ ಶಾಲೆಗಳ ಗುಣಮಟ್ಟ ಸುಧಾರಣೆಗೆ ಕ್ರಮ : ಶೂನ್ಯ ಫಲಿತಾಂಶ ಬಾರದಂತೆ ನೋಡಿಕೊಳ್ಳಲಾಗುವುದು. ರಾಜ್ಯದಲ್ಲಿ 46 ಸಾವಿರ ಶಾಲೆಗಳಿದ್ದಾಗ ಕೆಲವೊಂದು ಶಾಲೆಗಳು ಶೂನ್ಯ ಬರುತ್ತಿರುತ್ತವೆ. ಅವುಗಳು ಬರದಂತೆ ನೋಡಿಕೊಳ್ಳಲಾಗುವುದು. ಮಕ್ಕಳು ಸ್ವಂತ ಶಕ್ತಿಯ ಮೇಲೆ ಪರೀಕ್ಷೆ ಬರೆಯುತ್ತಿದ್ದಾರೆ. ಕಾಪಿ ಹೊಡೆಯುವುದು ಕಡಿಮೆ ಆಗಿದೆ. ದೇಶದಲ್ಲೇ ಮೊದಲು ನಮ್ಮಲ್ಲಿ ಪರೀಕ್ಷಾ ವ್ಯವಸ್ಥೆಗೆ ವೆಬ್ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು ಅದನ್ನು ಕೇಂದ್ರದ ಪರೀಕ್ಷೆಗಳಿಗೂ ಅಳವಡಿಸಿಕೊಳ್ಳಲಾಗಿದೆ ಎಂದು ಬಂಗಾರಪ್ಪ ತಿಳಿಸಿದರು.
ಡಿಡಿಪಿಐ, ಬಿಇಒಗಳ ಕೊರತೆ: ರಾಜ್ಯದಲ್ಲಿ ಡಿಡಿಪಿಐ, ಬಿಇಒಗಳ ಕೊರತೆ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸುದ್ದಿಗಾರರು ವಿಜಯಪುರ ಜಿಲ್ಲೆಗೆ ಕಾಯಂ ಡಿಡಿಪಿಐ ನೇಮಕ ಯಾವಾಗ ಮಾಡುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ಪದೋನ್ನತಿ ನೀಡಿ ನೇಮಕ ಮಾಡಬೇಕಾಗಿದೆ. ಸ್ಥಾನಗಳ ಸಂಖ್ಯೆಯಲ್ಲಿ ಏರುಪೇರಾಗಬಹುದು. ಉಸ್ತುವಾರಿ ಸಚಿವರ ಶಿಫಾರಸ್ಸು ಪಡೆದುಕೊಂಡು ನೇಮಕ ಮಾಡಲಾಗುತ್ತದೆ. ಕಲಿಕಾ ಬಂಧು, ಸೇತುಬಂಧ ಸಂದರ್ಭದಲ್ಲಿ ಡಿಡಿಪಿಐ ನೇಮಕ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದರು. ಶಾಸಕ ಸಿ.ಎಸ್.ನಾಡಗೌಡ ಉಪಸ್ಥಿತರಿದ್ದರು.