ಹುನಗುಂದ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೊಳಗೆ ನೀರು ನುಗ್ಗಿ ರೋಗಿಗಳು ಪರದಾಡಿ ಘಟನೆ ನಡೆಯಿತು.
ಆಸ್ಪತ್ರೆಗೆ ಮೂಲಸೌಲಭ್ಯ ನೀಡುವಂತೆ ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿ, ಕಳೆದ ಐದು ವರ್ಷದಿಂದ ಪ್ರತಿ ಬಾರಿ ಮಳೆಯಾದಾಗ ಆಸ್ಪತ್ರೆಗೆಯ ಹಿಂದುಗಡೆಯ ಲೇಔಟ್ ಮತ್ತು ಜಮೀನುಗಳ ನೀರು, ಅವೈಜ್ಞಾನಿಕ ಚರಂಡಿಯಿಂದ ಆಸ್ಪತ್ರೆಯ ವಿವಿಧ ವಾರ್ಡ್ಗಳಲ್ಲಿ ನುಗ್ಗಿ ಮತ್ತು ನೀರಿನ ಬಸಿಸೆಲೆಯಿಂದ ನೀರು ನಿಂತು ಆಸ್ಪತ್ರೆಯು ಈಜುಗೊಳದಂತೆ ಆಗಿದ್ದು, ಆಸ್ಪತ್ರೆಯಲ್ಲಿ ನೀರು ನಿಂತಿದ್ದರಿಂದ ರೋಗಿಗಳಿಗೆ ವೈದ್ಯರು ಚಿಕಿತ್ಸೆಯನ್ನು ನೀಡಲು ತೀವ್ರ ತೊಂದರೆಯಾಗುತ್ತಿದ್ದು ಸಾಕಷ್ಟು ಬಾರಿ ಕರವೇ ಸಂಘಟಯ ಮೂಲಕ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ಶಾಸಕರಿಗೆ, ಸಚಿವರಿಗೆ ಮನವಿ ಮೂಲಕ ತಿಳಿಸಿದರು.
ರೋಗಿಗಳಿಗೆ ಹಾಗೂ ವೈದ್ಯರಿಗೆ ತೊಂದರೆಯಾಗುತ್ತಿದ್ದು, ನೀರು ನಿಲ್ಲದಂತೆ ಕ್ರಮವಹಿಸಬೇಕು. ಇಲ್ಲವಾದರೆ ಉಗ್ರವಾದ ಹೋರಾಟವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರ ಘಟಕ ಅಧ್ಯಕ್ಷ ಹುಸೇನ ಸಂದಿಮನಿ ಮಾತನಾಡಿ, ಮಳೆಯ ನೀರು ಆಸ್ಪತ್ರೆಯಲ್ಲಿ ನೀರು ನುಗ್ಗಿರುವದರಿಂದ ಆಸ್ಪತ್ರೆಯ ತುರ್ತುನಿಗಾ ಘಟಕ, ಔಷಧಿ ವಿತರಣಾ ಕೇಂದ್ರ, ರಕ್ತ ಗುಂಪು ತಪಾಸಣೆ ಕೇಂದ್ರ, ಎಕ್ಸರೇ ರೂಮ್, ಎಂ.ಎನ್.ಆರ್.ಸಿ ಘಟಕ, ಪಿಎಚ್ಸಿ ಕೇಂದ್ರ ಸ್ಕ್ಯಾನಿಂಗ್ ಸೆಂಟರ್, ಆಯುಷ್ಯಾನ್ ಕೇಂದ್ರ ಸೇರಿದಂತೆ ಅನೇಕ ಕೇಂದ್ರಗಳಿಗೆ ನೀರು ಆವರಿಸಿರುವದರಿಂದ ರೋಗಿಗಳು ಪರದಾಡುವಂತಾಗಿದೆ ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೀರು ನಿಲ್ಲದಂತೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕರವೇ ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ನವೀದ ಸಂಧಿಮನಿ ಸೇರಿದಂತೆ ಇತರರು ಇದ್ದರು.