ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ ಮರಿಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಇಲ್ಲಿನ ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀತೆ ತೋರಿದ್ದಾರೆ.
ಘಟನೆ ವಿವರ : ಮುದ್ದೇಬಿಹಾಳ ಪಟ್ಟಣದ ಕುಂಟೋಜಿ ರಸ್ತೆಯ ಕಾರು ಸರ್ವಿಸ್ ಮಾಡುವ ಗುಂಡಿಯಲ್ಲಿ ಬಿದ್ದಿದ್ದ ನರಿ ಮರಿಯೊಂದು ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಅದೇ ದಾರಿಯಲ್ಲಿ ನಿತ್ಯ ವಾಯುವಿಹಾರಕ್ಕೆಂದು ಹೋಗುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಬಿಎ ವಿದ್ಯಾರ್ಥಿ ವಿನಯಕುಮಾರ ಕಡ್ಲಿಮಟ್ಟಿ,ಯುವಕರಾದ ಪರಶುರಾಮ ಢವಳಗಿ,ಯಲ್ಲಪ್ಪ ಕಲಗುರ್ಕಿ ಅವರು ಕೂಡಲೇ ಪತ್ರಕರ್ತರಿಗೆ ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ಮುಟ್ಟಿಸಿದ್ದಾರೆ.ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ಅವರ ಸೂಚನೆ ಮೇರೆಗೆ ಅಸ್ವಸ್ಥಗೊಂಡಿದ್ದ ನರಿ ಮರಿಯನ್ನು ಪಶು ಆಸ್ಪತ್ರೆಗೆ ಯುವಕರ ಸಹಾಯದಿಂದ ಅರಣ್ಯ ಗಸ್ತುಪಾಲಕ ಯಲಗೂರದಪ್ಪ ಗುಬ್ಬಿ ನರಿಮರಿಯನ್ನು ಎತ್ತಿಕೊಂಡು ತಂದು ಆಸ್ಪತ್ರೆಗೆ ದಾಖಲಿಸಿದರು.
ಬಳಿಕ ಮುಖ್ಯಪಶು ವೈದ್ಯರಾದ ಡಾ.ಸುರೇಶ ಭಜಂತ್ರಿ,ಡಾ.ಬಸವರಾಜ ಸಜ್ಜನ ಅಸ್ವಸ್ಥಗೊಂಡಿದ್ದ ನರಿ ಮರಿಗೆ ಚಿಕಿತ್ಸೆ ನೀಡಿದರು.ಈ ವೇಳೆ ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ,ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಶಿವಾನಂದ ಮೇಟಿ ಭೇಟಿ ನೀಡಿ ನರಿಮರಿಯ ಆರೋಗ್ಯವನ್ನು ಗಮನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಯುವಕರು ಹಾಗೂ ಅಧಿಕಾರಿಗಳು, ಅಸ್ವಸ್ಥಗೊಂಡಿದ್ದ ನರಿಮರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಅದು ಚೇತರಿಸಿಕೊಂಡ ನಂತರ ಮರಳಿ ಕಾಡಿಗೆ ಬಿಡುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನರಿಮರಿಯ ಚಿಕಿತ್ಸೆಗೆ ಸಿಬ್ಬಂದಿ ಭೀಮನಗೌಡ ಪಲದಿನ್ನಿ,ಮೌಲಾಸಾಬ ವಾಲೀಕಾರ ಸಹಾಯ ಮಾಡಿದರು.ಯುವಕರು ಹಾಗೂ ಅಧಿಕಾರಿಗಳ ತಂಡದ ಸಕಾಲೀಕ ಸಮಯಪ್ರಜ್ಞೆಯಿಂದ ತೀವ್ರ ನೋವಿನಿಂದ ನರಳುತ್ತಿದ್ದ ನರಿಮರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆತು ಚೇತರಿಕೆ ಕಂಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.







