ಮುದ್ದೇಬಿಹಾಳ : ತಾಲ್ಲೂಕಿನ ಯರಝರಿ ಗ್ರಾಪಂ ಪಿಡಿಒ ವಿಜಯಾ ಮುದಗಲ್ ಹಾಗೂ ಕಾರ್ಯದರ್ಶಿ ವಿಲಾಸ ಚವ್ಹಾಣ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದ್ದು ಮನೆಗಳ ಜಿಪಿಎಸ್ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಯರಝರಿ ಪಂಚಾಯಿತಿ ವ್ಯಾಪ್ತಿಯ ಹಂಡರಗಲ್ ಗ್ರಾಮಸ್ಥರು ತಾಪಂ ಇಒಗೆ ಸೋಮವಾರ ದೂರು ಸಲ್ಲಿಸಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಇಲ್ಲಿನ ತಾಲ್ಲೂಕಾ ಪಂಚಾಯಿತಿ ಕಚೇರಿಗೆ ಆಗಮಿಸಿದ್ದ ಹಂಡರಗಲ್ಲ ಗ್ರಾಮದ ಹುಲ್ಲಪ್ಪ ಕೇಸಾಪೂರ ಮಾತನಾಡಿ, ಯರಝರಿ ಗ್ರಾಪಂನ ವ್ಯಾಪ್ತಿಯಲ್ಲಿ ಹಂಡರಗಲ್ಲ ಗ್ರಾಮದಲ್ಲಿ ಸೆ.6 ರಂದು ಪೊಲೀಸರ ಬಲದೊಂದಿಗೆ ಪಿಡಿಒ, ಕಾರ್ಯದರ್ಶಿಗಳು ಬಂದು ನಮ್ಮ ಮನೆಯ ಪಕ್ಕದಲ್ಲಿ ಬುದ್ಧಿಮಾಂದ್ಯಳು, ವಿಕಲಚೇತನಳು ಇರುವ ಮರಗಮ್ಮ ಕೇಸಾಪುರ ಹಾಕಿಕೊಂಡು ಉಪಜೀವನ ನಡೆಸುತ್ತಿದ್ದ ಶೆಡ್ನ್ನು ತೆರವುಗೊಳಿಸಿದ್ದಾರೆ. ಗಾಂವಠಾಣ ಜಾಗೆ ಎಂದು ಅದನ್ನು ಪಿಡಿಒ, ಕಾರ್ಯದರ್ಶಿಗಳು ತೆರವುಗೊಳಿಸಿದ್ದಾರೆ.
ಗ್ರಾಮದಲ್ಲಿ ಇನ್ನೂ ಹಲವಾರು ಕಡೆ ಗಾಂವಠಾಣಾ ಜಾಗೆ ಇದ್ದರೂ ನಮ್ಮ ಮಗಳಿದ್ದ ಶೆಡ್ ತೆರವುಗೊಳಿಸಿ ಅನ್ಯಾಯ ಮಾಡಿದ್ದಾರೆ ಎಂದು ತಾಪಂ ಇಒಗೆ ದೂರಿದರು.
ಇದಕ್ಕೆ ಉತ್ತರಿಸಿದ ಯರಝರಿ ಗ್ರಾಪಂ ಕಾರ್ಯದರ್ಶಿ ವಿಲಾಸ ಚವ್ಹಾಣ, ಸದರಿ ಜಾಗೆ ಗ್ರಾಮ ಪಂಚಾಯಿತಿಗೆ ಸೇರಿದ ಗಾಂವಠಾಣೆ ಜಾಗೆ ಆಗಿದ್ದು ಅಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಜಾಗೆ ಗುರುತಿಸಲಾಗಿದೆ.ಹೀಗಾಗಿ ಅಲ್ಲಿನ ಅತಿಕ್ರಮಣ ತೆರವುಗೊಳಿಸಲಾಗಿದೆ. ಸರಕಾರದ ಜಾಗೆಯನ್ನು ಯಾರೊಬ್ಬರೂ ಅತಿಕ್ರಮಣ ಮಾಡಲು ಬರುವುದಿಲ್ಲ ಎಂದು ತಿಳಿಸಿದರು.
ತಾಪಂ ಇಒ ನಿಂಗಪ್ಪ ಮಸಳಿ ಮಾತನಾಡಿ, ಗ್ರಾಪಂ ಜಾಗೆ ಅತಿಕ್ರಮಿಸಲು ಅವಕಾಶ ಇಲ್ಲ.ಆದರೂ ಹಂಡರಗಲ್ಲ ಗ್ರಾಮದಲ್ಲಿನ ಗಾಂವಠಾಣೆ ಜಾಗೆ ಎಷ್ಟಿದೆ ಎಂಬುದನ್ನು ಪರಿಶೀಲನೆ ನಡೆಸಿ ಸದರಿ ವಿವಾದದ ಕುರಿತು ವರದಿ ನೀಡಲು ತಾಪಂ ವ್ಯವಸ್ಥಾಪಕರನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಪಿಡಿಒ ಅವರಿಂದ ಹಣಕ್ಕೆ ಬೇಡಿಕೆ ಆರೋಪ
ಗ್ರಾಮ ಪಂಚಾಯಿತಿ ಪಿಡಿಒ ವಿಜಯಾ ಮುದಗಲ್ ಜಿಪಿಎಸ್ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈಗಾಗಲೇ ಮನೆಗಳ ಜಿಪಿಎಸ್ ಮಾಡಲು 8 ಸಾವಿರ ರೂಪಾಯಿ ಹಣ ಕೊಟ್ಟಿದ್ದೇನೆ ಎಂದು ಗ್ರಾಮದ ದಾವಲಸಾಬ ಗುಡೂರ ಆರೋಪಿಸಿದರು.
ಸನ್ 2021ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ನನ್ನ ಪತ್ನಿಯ ಹೆಸರಿನಲ್ಲಿ ಮನೆ ಮಂಜೂರಾಗಿದ್ದು ಮೂರನೇ ಹಂತಕ್ಕೆ ಮನೆ ಬಂದು ನಿಂತಿದೆ.ಜಿಪಿಎಸ್ ಮಾಡಿಸಲು ಹಣವನ್ನು ಕೊಟ್ಟಿದ್ದೇನೆ. ಆದರೆ ಜಿಪಿಎಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಇಬ್ರಾಹಿಂ ಮಾಗಿ ಮಾತನಾಡಿ, ಯರಝರಿ ಗ್ರಾಪಂ ಕಾರ್ಯದರ್ಶಿ ವಿಲಾಸ ಚವ್ಹಾಣ ಗ್ರಾಮೀಣ ಭಾಗದ ಸಮಸ್ಯೆಗಳನ್ನು ತೆಗೆದುಕೊಂಡು ಹೋದರೆ ಜನರೊಂದಿಗೆ ಉಡಾಫೆಯೊಂದಿಗೆ ಮಾತನಾಡುತ್ತಾರೆ. ಅಲ್ಲದೇ ತಮ್ಮದೇ ಒಂದು ಗುಂಪು ಕಟ್ಟಿಕೊಂಡಿದ್ದು ಧ್ವನಿ ಎತ್ತುವವರ ಮೇಲೆ ಹೊಡೆಸುವ ಬೆದರಿಕೆ ಹಾಕುತ್ತಾರೆ. ಸೌಜನ್ಯದಿಂದ ವರ್ತಿಸುವುದೇ ಇಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಹುಟ್ಟಿದ ಮಗು ಹೆಣ್ಣೆಂಬ ಕಾರಣಕ್ಕೆ ಪ್ರೇಯಸಿಗೆ ಕೈಕೊಟ್ಟು ಪರಾರಿಯಾದ ಪ್ರಿಯಕರ!
ಜಿಪಿಎಸ್ಗೆ ಪಿಡಿಒ ಹಣ ಪಡೆದುಕೊಳ್ಳುತ್ತಾರೆ ಎನ್ನುವ ಆರೋಪ ಬಂದಾಗ ತಾಪಂ ಇಒ ಎದುರಿನಲ್ಲೇ ದೂರುದಾರರನ್ನು ಬೆದರಿಸುವ ಧಾಟಿಯಲ್ಲಿ ಕಾರ್ಯದರ್ಶಿ ವಿಲಾಸ ಚವ್ಹಾಣ ಅವರು ನಡೆದುಕೊಂಡಿದ್ದು ಕಂಡು ಬಂದಿತು.