ಮುದ್ದೇಬಿಹಾಳ : ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುದ್ದೇಬಿಹಾಳ ನಗರದಿಂದ ಹಿರೇಮುರಾಳ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಕಾರಿನ ಮೇಲೆ ಬ್ಯಾಗಿನಲ್ಲಿ ಇಟ್ಟಿದ್ದ 30 ಗ್ರಾಂ ಬಂಗಾರದ ಆಭರಣಗಳು ಜಾರಿ ಬಿದ್ದಿದ್ದು ಅದನ್ನು ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮೂವರು ಯುವಕರು ಕಳೆದುಕೊಂಡಿದ್ದ ಮಹಿಳೆಗೆ ಮರಳಿ ಪ್ರಾಮಾಣಿಕತೆ ತೋರಿದ್ದಾರೆ.
ಮುದ್ದೇಬಿಹಾಳದಿಂದ ಹಿರೇಮುರಾಳ ಕಡೆಗೆ ಮದುವೆ ಕಾರ್ಯಕ್ಕೆ ತೆರಳುತ್ತಿದ್ದ ಮಂಜುಳಾ ಅಶೋಕ ಅರ್ಮನ ಎಂಬುವರ ಚಿನ್ನಾಭರಣ ರಸ್ತೆಯಲ್ಲಿ ಬಿದ್ದಿವೆ. ಮುದ್ದೇಬಿಹಾಳದಿಂದ ನಾಲತವಾಡ ಕಡೆಗೆ ತೆರಳುತ್ತಿದ್ದ ಯುವಕರಾದ ಅಣ್ಣಾಜಿ ನೇಮಪ್ಪ ರಾಥೋಡ, ದೇವರಾಜ್ ಭೀಮಪ್ಪ ಗಾಂಜಿ ಮತ್ತು ಪರಶುರಾಮ ಯಮನಪ್ಪ ಚಲವಾದಿ ಅವರು ತಮಗೆ ಚಿಕ್ಕ ಬಂಗಾರದ ಆಭರಣಗಳನ್ನು ನೇರವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬ್ಯಾಗನ್ನು ಪರಿಶೀಲಿಸಿ ಅದರಲ್ಲಿದ್ದ ವಾರಸುದಾರರ ದಾಖಲೆಗಳನ್ನು ಪರಿಶೀಲನೆ ಮಾಡಿ ಅವರನ್ನು ಸಂಪರ್ಕ ಮಾಡಿ ವಾಪಸ್ ಕಳೆದುಕೊಂಡಿದ್ದ ಬಂಗಾರದ ಸಾಮಾನುಗಳನ್ನು ಮಂಜುಳ ಅಶೋಕ ಆರ್ಮನ ಅವರಿಗೆ ವಾಪಸ್ ಮರಳಿಸಿದ್ದಾರೆ.
ಪಿಎಸ್ಐ ಸಂಜಯ ತಿಪರೆಡ್ಡಿ ಮಾತನಾಡಿ, ಇಂತಹ ದಿನಮಾನಗಳಲ್ಲೂ ಪ್ರಾಮಾಣಿಕತೆ ಇಂತಹ ಯುವಕರ ಮೂಲಕ ಜೀವಂತ ಇದೆ ಎಂಬುದು ಕಂಡಾಗ ಹೆಮ್ಮೆ ಎನ್ನಿಸುತ್ತದೆ.ಚಿನ್ನಾಭರಣ ಮರಳಿಸಿದ ಯುವಕರ ಪ್ರಾಮಾಣಿಕತೆಯನ್ನು ಇಲಾಖೆಯಿಂದ ಪ್ರಶಂಸಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್.ಭಂಗಿ,ಪೊಲೀಸ್ ಇಲಾಖೆ ಸಿಬ್ಬಂದಿ ಸಂಗಮೇಶ ಚಲವಾದಿ ಇದ್ದರು.ರಸ್ತೆಯಲ್ಲಿ ಹತ್ತು ರೂಪಾಯಿ ಬಿದ್ದರೂ ಅಕ್ಕಪಕ್ಕ ಯಾರಾದರೂ ಇದ್ದಾರೆಯೇ ಎಂದು ಜೇಬಿಗೆ ಇಳಿಸಿಕೊಂಡು ಹೋಗುವವರಿರುವ ಕಾಲದಲ್ಲಿ ಚಿನ್ನಾಭರಣ ಮರಳಿಸಿರುವ ಯುವಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.







