ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹಿರೂರು ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ ಸಾಲಿನ ಸ್ನೇಹಸಿರಿ ಗೆಳೆಯರ ಬಳಗವು ರವಿವಾರ ಏರ್ಪಡಿಸಿದ್ದ ಪರಿವಾರದ ಸಮಾಗಮ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮವು ವೈಚಾರಿಕತೆಯಿಂದ ಕೂಡಿರುವ ವಿಶೇಷ ಕಾರ್ಯಕ್ರಮವಾಗಿದೆ.. ಸ್ನೇಹರಿಸಿ ಗೆಳೆಯರ ಬಳಗವು ನಗುವಿನ ಭಂಡಾರವಾಗಿರಲಿ.ಸಹಕಾರ, ಸಹನೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಗೆಳೆತನದ ಮಹತ್ವ ಸಾರುವ ಪರಿವಾರ ಸಮಾಗಮದಂಥ ಕಾರ್ಯಕ್ರಮಗಳು ಹೆಚ್ಚು ಅಗತ್ಯವಾಗಿವೆ. ಗೆಳೆತನದಲ್ಲಿ ಮನಸ್ಸು ದೊಡ್ಡದಾಗಿರಬೇಕು, ವಿಶಾಲವಾಗಿರಬೇಕು. ದೂರಾಲೋಚನೆ, ದೂರದೃಷ್ಟಿ ಇರಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಅಶೋಕ ಮಣಿ ಮಾತನಾಡಿ, ದೇಶದ ಸಂಸ್ಕೃತಿಯು ಒಂದಾಗಿ, ಚನ್ನಾಗಿ ಬದುಕುವುದರಲ್ಲಿದೆ. ಗೆಳೆತನದ ಮಹತ್ವ, ಪ್ರೀತಿಯನ್ನು ಮಕ್ಕಳಿಗೂ ಹಂಚಿಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಶಿವಾನಂದ ಬಿರಾದಾರ, ಮೋಹನ್ ಬಿಗ್ ಸೇಲನ ಮುಖ್ಯಸ್ಥೆ ಪ್ರೇಮಲಾಬಾಯಿ ಹಂಚಾಟೆ, ವಿಜಯಪುರದ ಗುತ್ತಿಗೆದಾರ ಸೋಮನಾಥ ಸೂಳಿಭಾವಿ, ಗೆಳೆಯರ ಬಳಗದ ರಾಜೇಂದ್ರಕುಮಾರ ದಂಡಾವತಿ, ಉಮೇಶ ಕಂಠಿ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ವೆಂಕನಗೌಡ ಪಾಟೀಲ ಇದ್ದರು.
ವಿವಿಧ ಪರೀಕ್ಷೆಗಳಲ್ಲಿ ಹೆಚ್ಚು ಅಂಕದೊAದಿಗೆ ಸಾಧನೆ ತೋರಿದ ವಿದ್ಯಾರ್ಥಿಗಳಾದ ಸಿಂಚನಾ ಸಿದ್ರಾಮೇಶ ಉಪನಾಳ, ಬೀಬಿಆಯಿಷಾ ಬುರಾನಸಾಬ ರುದ್ರವಾಡಿ, ಪವಿತ್ರಾ ದೌಲತರಾಯ ವಡವಡಗಿ, ದಿಶಾ ಮಂಗಸೂಳಿ, ಗಿರೀಶ ಶ್ರೀಶೈಲ ಸಿದ್ದಾಪುರ ಸೇರಿದಂತೆ ಗೆಳೆಯರ ಬಳಗದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸ್ನೇಹಿತರ ಬಳಗದ ಸದಸ್ಯರನ್ನು ಸನ್ಮಾನಿಸಲಾಯಿತು. ಮಾಣಿಕಚಂದ ದಂಡಾವತಿ,ಮಲ್ಲಪ್ಪ ಕಲ್ಲಪ್ಪಗೋಳ,ಶಿವಾನಂದ ಮಂಗಸೂಳಿ, ಸಿದ್ರಾಮೇಶ ಉಪನಾಳ, ಶ್ರೀಶೈಲ ಸಿದ್ದಾಪುರ, ಮೋಹನ್ ಹಂಚಾಟೆ, ರವಿ ಝಿಂಗಾಡೆ, ಬಸವರಾಜ ಗುರವ, ಎಂ.ಬಿ.ಪಾಟೀಲ, ರಾಘವೇಂದ್ರ ಬಡಿಗೇರ, ಪ್ರಭು ಮಂಗಸೂಳಿ, ಶ್ರೀಶೈಲ ಬಿಜ್ಜರಗಿ, ಅರುಣಕುಮಾರ ಹುನಗುಂದ, ಮಹಾಂತೇಶ ಕುಂಟೋಜಿ, ಎಸ್.ಐ.ಪಲ್ಲೇದ, ಬಸವರಾಜ ಬಡಿಗೇರ, ನಿಂಗಪ್ಪ ಚಟ್ಟೇರ, ಅಬ್ದುಲರಹೆಮಾನ ನದಾಫ, ಶಿವಪುತ್ರ ಅಜಮನಿ, ಈರಯ್ಯ ಹಿರೇಮಠ, ಶ್ರೀಕಾಂತ ಹಡಲಗೇರಿ ಸೇರಿದಂತೆ 100ಕ್ಕೂ ಹೆಚ್ಚು ಬಳಗದ ಸದಸ್ಯರು ಪಾಲ್ಗೊಂಡಿದ್ದರು.ದಾನಮ್ಮ ಪ್ರಾರ್ಥಿಸಿದರು. ಸಾಹಿತಿ ಬುರಾನ್ ರುದ್ರವಾಡಿ ಸ್ವಾಗತಿಸಿದರು. ವೆಂಕನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಬಿ.ವಡವಡಗಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ನಶೆಮುಕ್ತ ಮಹಾಅಭಿಯಾನ:
ಇದೇ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಓಂಶಾoತಿ ಭವನದ ವತಿಯಿಂದ ನಶೆಮುಕ್ತರಾಗುವ ಪ್ರತಿಜ್ಞಾ ಅಭಿಯಾನ ಏರ್ಪಡಿಸಲಾಗಿತ್ತು. ಬಿಕೆ ಶೋಭಾ ಅಕ್ಕನವರು ಮಾತನಾಡಿ ದಾದಿ ಪ್ರಕಾಶಮಣೀಜಿಯವರ ಸ್ಮರಣಾರ್ಥ ನಶೆಮುಕ್ತ ಭಾರತ ಅಭಿಯಾನ ಮತ್ತು ಮಿಷನ್ ಸ್ಪಂಧನ ಅಡಿಯಲ್ಲಿ ವಿಕಸಿತ ಭಾರತದತ್ತ ಒಂದು ಸಬಲವಾದ ಹೆಜ್ಜೆ ಇಡಲು 10 ಕೋಟಿ ನಶೆಮುಕ್ತರಾಗುವ ಪ್ರತಿಜ್ಞಎಗಳ ಮಹಾಅಭಿಯಾನ ದೇಶದ ಎಲ್ಲೆಡೆ ನಡೆಯುತ್ತಿದೆ. ಯಾವ್ಯಾವುದೋ ಕಾರಣಗಳಿಂದಾಗಿ ನಸೆಗೆ ದಾಸರಾಗಿರುವವರು ಈ ಕೂಡಲೇ ಅದನ್ನು ತ್ಯಜಿಸುವ ದೃಢಸಂಕಲ್ಪ ಮಾಡಬೇಕು. ಒಂದೂವರೆ ಇಂಚಿನ ಸಿಗರೇಟು ಐದೂವರೆ ಆರು ಅಡಿಯ ದೇಹವನ್ನು ನಾಶಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.







