ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಸಮೀತಿ ರಚನೆಯಲ್ಲಿ ಅಕ್ರಮ ನಡೆದಿದ್ದು ತನಿಖೆ ನಡೆಸಿ ನಿಯಮಾನುಸಾರ ಸಮೀತಿಯನ್ನು ಮರು ರಚಿಸಬೇಕು ಎಂದು ಆಗ್ರಹಿಸಿ ಗ್ರಾಮದ ಯುವಕರು,ಕೆಲ ಮುಖಂಡರು ಬಿಇಓಗೆ ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಪಟ್ಟಣದ ಬಿಇಓ ಕಚೇರಿಗೆ ಆಗಮಿಸಿದ್ದ ಗ್ರಾಮದ ಯುವಕರು,ಮುಖಂಡರು ಬಿಇಓ ಬಿ.ಎಸ್.ಸಾವಳಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಸಲ್ಲಿಸಿದ ಮನವಿಯಲ್ಲಿ, ಕುಂಟೋಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ರಚನೆಯ ಸಂದರ್ಭದಲ್ಲಿ ಸರ್ಕಾರದ ನಿಯಮಾವಳಿ ಹಾಗೂ ಮಾರ್ಗಸೂಚಿಗಳನ್ವಯ ಸರಿಯಾಗಿ ಪಾಲಿಸಿಲ್ಲ ಎಂಬ ಗಂಭೀರ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.ನಿಯಮಾನುಸಾರ ಎಸ್ಡಿಎಂಸಿ ಸಮೀತಿಯಲ್ಲಿ ಸದಸ್ಯರಾಗುವ ಪೋಷಕರ ಮಕ್ಕಳು ಸಂಬoಧಿಸಿದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಸೇರಿದಂತೆ ಅಗತ್ಯ ಅರ್ಹತೆಗಳನ್ನ ಪರಿಗಣಿಸಬೇಕಾಗಿರುತ್ತದೆ.ಆದರೆ ಶಾಲೆಯೊಂದಿಗೆ ನೇರ ಸಂಬoಧವಿಲ್ಲದ ಕೆಲವು ವ್ಯಕ್ತಿಗಳು ತಪ್ಪು ಮಾಹಿತಿ ಹಾಗೂ ಪ್ರಭಾವವನ್ನು ಬಳಸಿ ಸಮೀತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳನ್ನು ಪಡೆದಿದ್ದಾರೆ ಎಂಬ ಆರೋಪಗಳು ಬಂದಿವೆ.ಈ ಕುರಿತು ಪ್ರಶ್ನಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೆಲವು ವ್ಯಕ್ತಿಗಳಿಂದ ಬೆದರಿಕೆ ಹಾಕುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವ ಘಟನೆಗಳು ನಡೆದಿವೆ.’ನಾವು ಶಾಲೆಗೆ ಭೂದಾನ ನೀಡಿದ್ದೇವೆ.ನಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡದಿದ್ದರೆ ಶಾಲೆಗೆ ಬೀಗ ಹಾಕುತ್ತೇವೆ’ ಎಂಬ ರೀತಿಯ ಬೆದರಿಕೆಯ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.
ಕೂಡಲೇ ಅಧಿಕಾರಿಗಳು ಪ್ರಸ್ತುತ ರಚನೆಯಾಗಿರುವ ಎಸ್.ಡಿ.ಎಂ.ಸಿ ಸಮೀತಿಯ ರಚನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತನಿಖೆ ನಡೆಸಬೇಕು.ಸಮಿತಿಯಲ್ಲಿರುವ ಪ್ರತಿ ಸದಸ್ಯರ ಅರ್ಹತೆ ಅವರ ಮಕ್ಕಳು ಸದರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು.ನಿಯಮಾವಳಿಗಳನ್ನು ಉಲ್ಲಂಘಿಸಿದ್ದು ಕಂಡು ಬಂದರೆ ಪ್ರಸ್ತುತ ಎಸ್ಡಿಎಂಸಿ ಸಮಿತಿ ವಿಸರ್ಜನೆ ಮಾಡಿ ಹೊಸದಾಗಿ ಸಮೀತಿಯನ್ನು ರಚಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಮಯದಲ್ಲಿ ಮಂಜುನಾಥ ಹೆಬ್ಬಾಳ,ವಿಜಯ ಲಿಂಗದಳ್ಳಿ,ಬಸವರಾಜ ಕಾಟಿ,ಅನೀಲ ಪಲ್ಲೇದ,ಬಸ್ಸು ಚವನಬಾವಿ,ಸಚಿನ ಚಿನ್ನಾಪೂರ,ಮಹೇಶ ಹುಗ್ಗಿ,ಶಿವು ಕುರಿ,ಪ್ರವೀಣ ಪಲ್ಲೇದ,ರಾಮು ಗಂಜಿಹಾಳ,ಶಾಹೀಲ್ ತಾಳಿಕೋಟಿ, ಎಂ.ಬಿ.ಸರೂರ, ಎಸ್.ಸಿ.ತಳವಾರ,ಶಿವಪ್ಪ ನಾಯ್ಕೋಡಿ ಮೊದಲಾದವರು ಇದ್ದರು.
ನಮ್ಮ ಪೂರ್ವಜರು ಶಾಲೆಗೆ ಭೂದಾನ ನೀಡಿದ್ದಾರೆ.ಗ್ರಾಮಸ್ಥರ ಹಾಗೂ ಪಾಲಕರ ಅಭಿಪ್ರಾಯ ಪಡೆದುಕೊಂಡೇ ನನ್ನನ್ನು ಅಧ್ಯಕ್ಷನೆಂದು ಘೋಷಿಸಲಾಗಿದೆ.ಆದರೆ ಈಗ ಮನವಿ ಕೊಟ್ಟವರಲ್ಲಿ ಬಹುತೇಕರಿಗೆ ಮದುವೆಯೇ ಆಗಿಲ್ಲ.ನನ್ನ ಮೊಮ್ಮಗ ಸರ್ಕಾರಿ ಶಾಲೆಯಲ್ಲಿಯೇ ಓದುತ್ತಿದ್ದಾನೆ.ನಾನು ಪೋಷಕನಾಗಿದ್ದು ನಿಯಮಾನುಸಾರವೇ ಆಯ್ಕೆ ನಡೆದಿದೆ. —-ಎಂ.ಬಿ.ಬಿರಾದಾರ,ಎಸ್ಡಿಎoಸಿ ಅಧ್ಯಕ್ಷ,ಕುಂಟೋಜಿ
ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪಾಲಕರು ಎಸ್.ಡಿ.ಎಂಸಿಗೆ ಪದಾಧಿಕಾರಿಗಳಾಗಲು ನಿಯಮ ರೂಪಿಸಲಾಗಿದೆ.ಈ ಬಗ್ಗೆ ಗ್ರಾಮಸ್ಥರಿಂದ ಸಲ್ಲಿಕೆಯಾದ ದೂರು ಅರ್ಜಿಯನ್ನು ಗಮನಿಸಲಾಗುವುದು.ಶಾಲೆಗೆ ಭೇಟಿ ನೀಡಿ ಸಮೀತಿ ರಚನೆಯಲ್ಲಿ ಯಾವ ನಿಯಮಗಳನ್ನು ಅನುಸರಿಸಲಾಗಿದೆ ಪರಿಶೀಲನೆ ಮಾಡುತ್ತೇನೆ.ಶಿಕ್ಷಣ ಪ್ರೇಮಿಗಳನ್ನು,ಹಿತೈಷಿಗಳನ್ನು ಶಾಲೆಯ ಗೌರವಧ್ಯಾಕ್ಷರನ್ನಾಗಿ ಆಯ್ಕೆ ಮಾಡಬಹುದಾಗಿದೆ.
—ಆರ್.ಬಿ.ಧಮ್ಮೂರಮಠ, ಬಿ.ಆರ್.ಸಿ







