ಮುದ್ದೇಬಿಹಾಳ : ಮಹತ್ವದ ಬೆಳವಣಿಗೆಯೊಂದರಲ್ಲಿ ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ತಿರಸ್ಕಾರಗೊಂಡಿದ್ದ ನಾಲ್ವರ ನಾಮಪತ್ರಗಳನ್ನು ಕ್ರಮಬದ್ಧಗೊಳಿಸಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಕಲ್ಬುರ್ಗಿ ಉಚ್ಛ ನ್ಯಾಯಾಲಯ ಮಧ್ಯಂತರ ಆದೇಶ ನೀಡಿರುವ ಬೆಳವಣಿಗೆ ಮಂಗಳವಾರ ಜರುಗಿದೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತ ವಿವರಣೆ ನೀಡಿದ ಮುಖಂಡ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ ಅವರು, ಚುನಾವಣಾಧಿಕಾರಿಗಳು ನಮ್ಮ ನಾಮಪತ್ರಗಳನ್ನು ತಿರಸ್ಕರಿಸಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು.ಚುನಾವಣಾಧಿಕಾರಿಗಳಿಗೆ ಈ ಕುರಿತು ವಿನಂತಿಪೂರ್ವಕವಾಗಿ ಮನವಿ ಮಾಡಿದಾಗ್ಯೂ ತಮ್ಮದೇ ವಾದ ಮುಂದುವರೆಸಿದರಲ್ಲದೇ ನೀವು ಕೋರ್ಟ್ಗೆ ಹೋಗಿ ತಮ್ಮ ಆದೇಶ ಪ್ರಶ್ನಿಸುವಂತೆ ತಿಳಿಸಿದ್ದರು.ಅದರಂತೆ ಚುನಾವಣಾಧಿಕಾರಿಗಳ ನಿರ್ಧಾರವನ್ನು ನಾವು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದೇವು.ಆ.10 ರಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು ನಮಗೆ ಚುನಾವಣೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಿದೆ.ಅಂಜುಮನ್ ಕಮೀಟಿಗೆ 90 ವರ್ಷಗಳ ಇತಿಹಾಸ ಇದ್ದು ಈ ಸಂಸ್ಥೆಯ ಘನತೆ ಎತ್ತಿ ಹಿಡಿಯುವವರಿಗೆ ಮತ ನೀಡುವಂತೆ ಹೇಳಿದರು.
ಪತ್ರಕರ್ತ ಎಚ್.ಆರ್.ಬಾಗವಾನ ಮಾತನಾಡಿ, ಚುನಾವಣೆಯಲ್ಲಿ ರಾಗದ್ವೇಷಗಳನ್ನು ಬಿಟ್ಟು ಎಲ್ಲ ಮತದಾರರು ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು.ಅಂಜುಮನ್ ಸಂಸ್ಥೆಯಲ್ಲಿ ಶಾಲೆ,ಆಸ್ಪತ್ರೆ ಹಾಗೂ ಉದ್ಯೋಗ ಅವಕಾಶ ಕಲ್ಪಿಸಲು ಮಳಿಗೆಗಳನ್ನು ನಿರ್ಮಿಸಲು ಭವಿಷ್ಯದ ದೃಷ್ಟಿಕೋನ ಉಳ್ಳವರನ್ನು ಆಯ್ಕೆಗೆ ಶ್ರಮಿಸಬೇಕು ಎಂದು ಹೇಳಿದರು.
ಜನರಕೂಗು ವಾಹಿನಿ ಸಂಸ್ಥಾಪಕ, ಅಭ್ಯರ್ಥಿ ಗುಲಾಮಮೊಹ್ಮದ ದಫೇದಾರ ಮಾತನಾಡಿ, ನಮ್ಮ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ನ್ಯಾಯಾಲಯವೇ ಉತ್ತರ ಕೊಟ್ಟಿದೆ.ಅಂತಹವರಿಗೆ ಅಲ್ಲಾಹನು ಒಳ್ಳೆಯ ಬುದ್ಧಿಕೊಡಲಿ.ನಮ್ಮ ಸಮಾಜದ ಮಕ್ಕಳ ಶೈಕ್ಷಣಿಕೆ ಪ್ರಗತಿಗೆ ಆಸರೆಯಾಗಿರುವ ಅಂಜುಮನ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ನಮ್ಮ ಗುರಿಯಾಗಿದೆ.ನಾವು ಹೇಗಿದ್ದೇವೆ ಎಂಬುದು ಸಮಾಜದ ಜನರಿಗೆ ತಿಳಿದಿದೆ.ನಿಮ್ಮ ಆಶೀರ್ವಾದ ನಮ್ಮ ಮೇಲಿದ್ದರೆ ಸಂಸ್ಥೆಯ ಏಳ್ಗೆಗೆ ನಾವು ಶಕ್ತಿಮೀರಿ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದು ಹೇಳಿದರು. ಅಭ್ಯರ್ಥಿಗಳಾದ ಇಸ್ಮಾಯಿಲ್ ಗೋಲಂದಾಜ್,ಯಾಸೀನ್ ಸೋಠೆ ಸಮಾಜದ ಬಾಂಧವರಲ್ಲಿ ಹಾಗೂ ಮತದಾರರಲ್ಲಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಹಾಜಿ ಭಾಷಾಸಾಬ ನಾಯ್ಕೋಡಿ ಇದ್ದರು.
ಕಲ್ಬುರ್ಗಿ ಉಚ್ಛ ನ್ಯಾಯಾಲಯದ ಆದೇಶದಂತೆ ನಾಲ್ವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.63 ಜನರ ಬದಲಾಗಿ 67 ಜನರು ಈಗ ಕಣದಲ್ಲಿ ಉಳಿದಿದ್ದಾರೆ.ಅಬ್ದುಲಗಫೂರ ಮಕಾನದಾರ,ಗುಲಾಮಮೊಹ್ಮದ ದಫೇದಾರ,ಯಾಸೀನ ಸೋಠೆ,ಇಸ್ಮಾಯಿಲ್ ಗೋಲಂದಾಜ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.ಒಂದೇ ಮತಪಟ್ಟಿ ಇರಲಿದ್ದು ಅದರಲ್ಲಿಯೇ ನ್ಯಾಯಾಲಯ ನಿರ್ದೇಶನ ನೀಡಿದ ನಾಲ್ವರನ್ನು ಸೇರಿಸಿ ಚುನಾವಣೆಯಲ್ಲಿ ಮತದಾನ ದಿನದಂದು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ. —ತಬಸ್ಸುಮ್ ಮುಲ್ಲಾ,ಸಹಾಯಕ ಚುನಾವಣಾಧಿಕಾರಿ/ಕೇರ್ ಟೇಕರ್ ಅಂಜುಮನ್ ಕಮೀಟಿ,ಮುದ್ದೇಬಿಹಾಳ
ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ತಿರಸ್ಕಾರಗೊಂಡಿದ್ದ ಅಭ್ಯರ್ಥಿಗಳನ್ನು ಸೇರಿಸಿ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಉಚ್ಛನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಮಧ್ಯಂತರ ಆದೇಶ ಮಾಡಿಸಲು ಶ್ರಮಿಸಿದ ವಕೀಲರಾದ ಮಹೆಬೂಬ ಹಳ್ಳಿ ಅವರ ಕಾರ್ಯವು ಅಂಜುಮನ್ ಕಮೀಟಿಗೆ ಯೋಗ್ಯರ ಆಯ್ಕೆಗೆ ಹೊಸ ದಾರಿಯನ್ನು ಮಾಡಿಕೊಟ್ಟಿದೆ.
–-ಎಚ್.ಆರ್.ಬಾಗವಾನ್,ಮುಸ್ಲಿಂ ಸಮಾಜದ ಮುಖಂಡ







