ವಿಜಯಪುರ: ನಾವು ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ದುಶ್ಚಟಗಳಿಂದ ದೂರ ಇರಬೇಕೆಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ಬಿ.ಕೆ.ಶೃತಿ ಕರೆ ನೀಡಿದರು.
ಅವರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಓಂ ಶಾಂತಿ ಸಂಸ್ಥೆ ಹಮ್ಮಿಕೊಂಡಿದ್ದ ನಶಾಮುಕ್ತ ಮಹಾ ಅಭಿಯಾನದಲ್ಲಿ ಅಂಚೆ ನೌಕರರಿಗೆ ವ್ಯಸನಗಳಿಂದ ದೂರ ಇರುವ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಆರೋಗ್ಯವಂತ ಹಾಗೂ ಸ್ವಾಸ್ಥ್ಯಭರಿತ ಸಮಾಜ ನಿರ್ಮಾಣದಲ್ಲಿ ನಾವೆಲ್ಲರೂ ಮಹತ್ವದ ಪಾತ್ರ ವಹಿಸಬೇಕು. ಮಾದಕ ವ್ಯಸನಗಳು ಹಾಗೂ ದುಶ್ಚಟಗಳಿಗೆ ಒಳಗಾಗದೆ, ಶುದ್ಧ ಹಾಗೂ ಸದೃಢ ವ್ಯಕ್ತಿತ್ವ ರೂಪಿಸಿಕೊಂಡು ಆರೋಗ್ಯಕರ ಬದುಕು ನಡೆಸಬೇಕು ಎಂದು ಅವರು ಹೇಳಿದರು.
ಇಂದಿನ ಯುವಜನತೆಯಲ್ಲಿ ಮಾದಕ ದ್ರವ್ಯಗಳ ಬಳಕೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಉಲ್ಬಣಿಸುತ್ತಿದ್ದು, ಕುಟುಂಬ ಮತ್ತು ಸಮಾಜದ ಸ್ವಾಸ್ಥ್ಯಕ್ಕೂ ನಶೆ ಮಾರಕವಾಗುತ್ತಿದೆ ಎಂದರು.
ನೌಕರರು ದುಶ್ಚಟಗಳ ದಾಸರಾದರೆ ಮನೆಯ ಸದಸ್ಯರು ನೆಮ್ಮದಿಯಿಂದ ಬದುಕಲು ಆಗುವುದಿಲ್ಲ. ಇದು ಮನೆಯ ಎಲ್ಲ ಸದಸ್ಯರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ವ್ಯಸನ ಅಪರಾಧ ಜಗತ್ತಿನತ್ತ ಕೊಂಡೊಯ್ಯುವ ಅಪಾಯವಿದ್ದು, ಆರಂಭದಲ್ಲೇ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಓಂ ಶಾಂತಿ ಕೇಂದ್ರದ ಬಿ.ಕೆ.ಕಮಲೇಶ ಪ್ರಾಸ್ತಾವಿಕವಾಗಿ ಮಾತನಾಡಿ,ಅತೀಯಾದ ಮೊಬೈಲ್ ವೀಕ್ಷಣೆ, ರೀಲ್ಸ ನೋಡುತ್ತಲೇ ಹೊತ್ತು ಕಳೆಯುವುದು, ಕುಡಿತ, ಧೂಮಪಾನ, ತಂಬಾಕು ಅಗಿಯುವ, ಸುಳ್ಳು ಹೇಳುವ ಯಾವುದೇ ದುಶ್ಚಟಗಳು ವ್ಯಕ್ತಿಯ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.ಆರೋಗ್ಯಕರ ಆಹಾರ ಪದ್ಧತಿ, ಉತ್ತಮ ಸ್ನೇಹಿತರ ಒಡನಾಟ ಬೆಳೆಸಿಕೊಂಡು ಉತ್ತಮ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ನಶಾಮುಕ್ತ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದವರು ಹೇಳಿದರು.
ಓಂ ಶಾಂತಿ ಆಶ್ರಮದ ಬಿ.ಕೆ. ಹಿರೇಮಠ ಜಿ.ಎಸ್., ಬಿ.ಕೆ.ಪ್ರಭು, ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಎಂ.ಓ.ತದ್ದೇವಾಡಿ, ಡಿ.ಪಿ.ಎಂ. ಭಜಂತ್ರಿ, ಅಕೌಂಟೆಂಟ್ ಕಿರಣ ಅಂಗಡಿ, ಎ.ಪಿ.ಎಂ. ಎಂ.ಎಸ್.ಗಡೇದ, ಶಿವಾನಂದ ದಳವಾಯಿ, ಗೌರೀಶ ಸಾಂಗೋಲಿ, ಸುಧಾ ನಾಟೀಕಾರ, ಸುರೇಶ ಪಾಟೀಲ, ಚಿದಾನಂದ ತೇಲಿ, ಶಿವಣ್ಣ ರೊಳ್ಳಿ, ಮಲ್ಲಮ್ಮ ಪಾಟೀಲ, ಭುವನೇಶ್ವರಿ, ಗೀತಾ ಪಾಟೀಲ, ಹಡಪದ, ಬಳಮಕರ, ಶಿವು ಕಾಂಬಳೆ, ಸುಭಾಸ ಇತರರು ಉಪಸ್ಥಿತರಿದ್ದರು.







