ಮುದ್ದೇಬಿಹಾಳ : ಕಬ್ಬಿಗೆ 3500 ರೂ.ದರ ನಿಗದಿ ಮಾಡುವವರೆಗೂ ಕಬ್ಬು ಕಟಾವು ಮಾಡಲು ಕಾರ್ಖಾನೆಯವರು ಆದೇಶ ನೀಡಬಾರದು.ಅಲ್ಲಿಯವರೆಗೂ ನಾವು ಹೋರಾಟ ಬಿಟ್ಟು ಕದಲುವುದಿಲ್ಲ ಎಂದು ರೈತ ಮುಖಂಡರು ತಿಳಿಸಿದರು.
ತಾಲ್ಲೂಕಿನ ಯರಗಲ್ ಮದರಿ ಬಳಿ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಟ್ರಾö್ಯಕ್ಟರ್ಗಳನ್ನು ತಂಗಡಗಿ ಗ್ರಾಮದ ಸಮೀಪದಲ್ಲಿರುವ ಅಮರಗೋಳ ಕ್ರಾಸ್ನಲ್ಲಿ ನಿಲುಗಡೆ ಮಾಡಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಈ ನಿರ್ಧಾರವನ್ನು ಅಧಿಕಾರಿಗಳಿಗೆ ಪ್ರತಿಭಟನಾಕಾರರು ತಿಳಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಮಾತನಾಡಿ,ಕಾರ್ಖಾನೆಗಳಿಗೆ ಲಾಭವಿದ್ದರೂ ರೈತರಿಗೆ ಅದರ ಲಾಭಾಂಶವನ್ನು ಕೊಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.ಪ್ರತಿಭಟನೆಗೆ ಮುಂದಾದ ರೈತರನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ದೂರಿದರು.
ರೈತ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಪೊಲೀಸರು ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ರೈತರಿಗೆ ರಕ್ಷಣೆ ಒದಗಿಸಬೇಕು.ರೈತರ ಬೇಡಿಕೆಯಂತೆ 3500 ರೂ.ದರ ನಿಗದಿ ಮಾಡುವವರೆಗೂ ಕಬ್ಬು ನುರಿಸುವುದನ್ನು ಬಂದ್ ಮಾಡಬೇಕು.
ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಮಾತನಾಡಿ, ಈಗಾಗಲೇ ಹೊಲಗಳಲ್ಲಿ ಕಟಾವು ಮಾಡಿರುವ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಅವಕಾಶ ಕಲ್ಪಿಸಬೇಕು.ನಾಳೆಯಿಂದ ಕಬ್ಬು ಕಡಿತ ನಿಲ್ಲಿಸುವಂತೆ ಕಾರ್ಖಾನೆಯವರು ರೈತರಿಗೆ ತಿಳಿಸಲಿದ್ದಾರೆ.ಹೋರಾಟದಿಂದ ಯಾವುದೇ ಒಬ್ಬ ರೈತನಿಗೂ ಅನ್ಯಾಯ ಆಗಬಾರದು ಎಂದು ಹೇಳಿದರು.
ಬಾಲಾಜಿ ಶುರ್ಸ್ ನಿರ್ದೇಶಕರಾದ ರಾಹುಲಗೌಡ ಪಾಟೀಲ, ಕಬ್ಬು ಪೂರೈಕೆ ವಿಭಾಗದ ಜಿ.ಎಂ.ಬಿರಾದಾರ ಮಾತನಾಡಿ, ಅಧಿಕಾರಿಗಳು,ರೈತರ ಮನವಿಯಂತೆ ಈಗಾಗಲೇ ಕಟಾವು ಮಾಡಿದ ಜಮೀನಿನಲ್ಲಿರುವ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಅನುವು ಮಾಡಿಕೊಟ್ಟ ಬಳಿಕ ನ.6 ರಿಂದಲೇ ಕಬ್ಬು ಕಟಾವು ಮಾಡುವುದನ್ನು ಸ್ಥಗಿತಗೊಳಿಸುವಂತೆ ರೈತರಿಗೆ ತಿಳಿಸಲಾಗುವುದು.ಸರ್ಕಾರದ ಮಟ್ಟದಲ್ಲಿ ಬೆಲೆ ಹೆಚ್ಚಳ ನಿರ್ಧಾರ ಆಗಬೇಕಿರುವುದರಿಂದ ಅಲ್ಲಿಯವರೆಗೆ ಕಾಯುವುದು ಅನಿವಾರ್ಯ ಎಂದು ಹೇಳಿದರು.
ತಹಶೀಲ್ದಾರ್ ಕೀರ್ತಿ ಚಾಲಕ, ಕಂದಾಯ ನಿರೀಕ್ಷಕ ಪವನ್ ತಳವಾರ, ಪಿಎಸೈ ಸಂಜಯ ತಿಪರೆಡ್ಡಿ, ರೈತರಾದ ಸಿದ್ದಣ್ಣ ಮೇಟಿ, ಮಲ್ಲಿಕಾರ್ಜುನ ಬೀಸಲದಿನ್ನಿ, ಸೋಮನಗೌಡ ಪಾಟೀಲ, ಶಂಕ್ರಗೌಡ ಲಿಂಗದಳ್ಳಿ, ಗುರುಸಂಗಪ್ಪ ಹಂಡರಗಲ್ಲ, ಶಿವನಗೌಡ ಯಾಳವಾರ,ಶ್ರೀಶೈಲ ಅಳ್ಳಗಿ, ನಿಖಿಲ ಮಲಗಲದಿನ್ನಿ,ಗಂಗು ಕುಂಬಾರ,ಬಸನಗೌಡ ಗೋನಾಳ, ಬಸನಗೌಡ ಬಿರಾದಾರ,ಮಾಳಪ್ಪ ಬೂದಿಹಾಳ,ಬಸವರಾಜ ಮಾಮನಿ,ಹರೀಶ ಲಾಯದಗುಂದಿ,ಶಿವನಗೌಡ ಬಿರಾದಾರ (ಜಲಪೂರ) ಮೊದಲಾದವರು ಇದ್ದರು.







