ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ (Gruha Lakshmi) ಹಣ ಬಿಡುಗಡೆ ವಿಚಾರವಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿರುವ ಮಹಿಳೆಯರಿಗೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಗುಡ್ನ್ಯೂಸ್ ನೀಡಿದ್ದಾರೆ.
ಸೋಮವಾರದಿಂದ ಶನಿವಾರದ ಒಳಗಡೆ 24ನೇ ಕಂತು ಬಿಡುಗಡೆ ಆಗುತ್ತೆ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಈಗಾಗಲೇ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿದೆ. ಮುಂದಿನ ವಾರ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಸತ್ತವರ ಖಾತೆಗೂ ಗೃಹಲಕ್ಷ್ಮೀ ಯೋಜನೆ ಹಣಕ್ಕೆ ಬ್ರೇಕ್!
ಇನ್ನು ಸತ್ತವರ ಖಾತೆಗೂ ಗೃಹಲಕ್ಷ್ಮೀ ಯೋಜನೆ ಹಣ ಸಂದಾಯ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಸಿಎಸ್ ನೇತೃತ್ವದಲ್ಲಿ ಎರಡು ಬಾರಿ ಸಭೆ ಮಾಡಲಾಗಿದೆ. ಸತ್ತವರ ಅಕೌಂಟ್ಗೆ ಹಣ ಸಂದಾಯವಾದರೆ ತಕ್ಷಣ ಗೊತ್ತಾಗಲ್ಲ. ಈಗ ಸಾಫ್ಟ್ವೇರ್ ಅಭಿವೃದ್ಧಿ ಅಳವಡಿಕೆ ಮಾಡಿದ್ದೇವೆ. ಮರಣ ಪ್ರಮಾಣ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತರು ಪರಿಶೀಲನೆ ಮಾಡುತ್ತಾರೆ. ಹೀಗಾಗಿ ಅದನ್ನ ಸದ್ಯಕ್ಕೆ ತಡೆಹಿಡಿದಿದ್ದೇವೆ. ತಪ್ಪಾಗಿ ಸಂದಾಯವಾಗಿರುವ ಹಣವನ್ನು ವಾಪಸ್ ಪಡೆಯುವ ಹೊಣೆಗಾರಿಕೆಯನ್ನು ಕೆಲ ಬ್ಯಾಂಕ್ಗೆ ಸೂಚನೆ ಕೊಟ್ಟಿದ್ದೇವೆ. ಸಿಎಸ್ ಬ್ಯಾಂಕ್ಗೆ ನೋಟಿಸ್ ಕೊಟ್ಟಿದ್ದಾರೆ, ಲೇಟರ್ ಬರೆದಿದ್ದಾರೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 19 ತಾಲೂಕುಗಳು ಆಗುವ ಸಾಧ್ಯತೆ
ಬೆಳಗಾವಿ ಜಿಲ್ಲಾ ವಿಭಜನೆ ಕೂಗು ತಣ್ಣಗಾಯಿತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿಎಂ ಮನಸ್ಸಿನಲ್ಲಿ ಜಿಲ್ಲೆ ವಿಭಜನೆ ಮಾಡಬೇಕು ಅನ್ನೋದು ಇದೆ. ಆಡಳಿತಾತ್ಮಕ, ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ವಿಭಜನೆ ಆಗಬೇಕಿದೆ. ಬೆಳಗಾವಿ ತಾಲೂಕಿನಲ್ಲಿ ಹನ್ನೊಂದೂವರೆ ಲಕ್ಷ ಜನಸಂಖ್ಯೆ ಇದೆ. ಇಷ್ಟು ಜನಸಂಖ್ಯೆಗೆ ಒಬ್ಬ ತಹಶೀಲ್ದಾರ್, ಬಹಳ ತೊಂದರೆ ಆಗುತ್ತೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 19 ತಾಲೂಕುಗಳು ಆಗುವ ಸಾಧ್ಯತೆ ಇದೆ. ಜಿಲ್ಲೆ ವಿಭಜನೆ ಘೋಷಣೆ ಮಾಡುವ ಮನಸ್ಸಿನಿಂದಲೇ ಸಿಎಂ ಬಂದಿದ್ದರು. ಬಹಳಷ್ಟು ಜನರು ನಿಯೋಗ ಬಂದಿದ್ದರಿಂದ ಚಿಂತನೆ ಮಾಡಿಲ್ಲ ಎಂದಿದ್ದಾರೆ.







