ಮುದ್ದೇಬಿಹಾಳ : ಬಸ್ ನಿಲ್ದಾಣದಲ್ಲಿ ಮೂತ್ರಾಲಯದ ಅವ್ಯವಸ್ಥೆಯನ್ನು ಯುವ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ದಲ್ಲಿ ಫೋಟೋ ತಗೆದುಕೊಂಡು ಬಂದು ಅವ್ಯವಸ್ಥೆಯ ಕುರಿತು ಶಾಸಕ ಸಿ.ಎಸ್.ನಾಡಗೌಡರಿಗೆ ದರ್ಶನ ಮಾಡಿಸಿದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆಯಿತು.
ಮೂತ್ರಾಲಯದ ಅವ್ಯವಸ್ಥೆ ಸಾಕಷ್ಟಿದ್ದು ಪುರುಷರು ಮೂತ್ರ ವಿಸರ್ಜನೆಗೆ ನಿಂತರೆ ನಿಲ್ದಾಣದೊಳಕ್ಕೆ ಬರುವ ಮಹಿಳೆಯರು ಮೂಗು,ಕಣ್ಣು ಮುಚ್ಚಿಕೊಂಡು ಬರುವ ದುಸ್ಥಿತಿ ಇದೆ ಎಂದು ಹೇಳಲು ಯುವ ಪ್ರಯಾಣಿಕ ಮುಂದಾದರು.
ಯುವ ಪ್ರಯಾಣಿಕನ ಮೊಬೈಲ್ದಲ್ಲಿರುವ ಫೋಟೋ ನೋಡುತ್ತಲೇ ಅಸಮಾಧಾನದಿಂದ ಮಾತನಾಡಿದ ಶಾಸಕ ನಾಡಗೌಡರು, ಪ್ರಯಾಣಿಕರಲ್ಲೂ ಶುಚಿತ್ವದ ಅರಿವು ಬರಬೇಕು.ಬಸ್ ನಿಲ್ದಾಣ ವಿಶಾಲವಿದೆ ಎಂದ ಮಾತ್ರಕ್ಕೆ ಎಲ್ಲೆಂದರಲ್ಲಿ ನಿಂತು ಅನೈರ್ಮಲ್ಯದ ವಾತಾವರಣ ಉಂಟು ಮಾಡಬಾರದು.ಸರ್ಕಾರದಿಂದ ಅನುದಾನ ದೊರೆತ ಕೂಡಲೇ ಇದನ್ನು ಸರಿಪಡಿಸಲಾಗುತ್ತದೆ ಎನ್ನುತ್ತಲೇ ಶಿಕ್ಷಿತರು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಯುವ ಪ್ರಯಾಣಿಕನಿಗೆ ಶುಚಿತ್ವದ ಪಾಠ ಹೇಳಿದ ಪ್ರಸಂಗ ಜರುಗಿತು. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ,ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ,ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಡಿ.ಹಿರೇಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಇದ್ದರು.



