ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಜನಪದ ಹಾಡುಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದು ಎಲ್ಲರೂ ಹೇಳುತ್ತಾರೆ.ಆದರೆ ಜನರು,ಸಮಾಜ ಬಯಸುವುದನ್ನೇ ಬಡ ಕಲಾವಿದರು ನೀಡುತ್ತಾರೆ.ಮೊದಲು ಸಮಾಜ ಯಾವುದನ್ನು ಕಲಾವಿದರಿಂದ ಬಯಸಬೇಕು ಎಂಬುದನ್ನು ಆತ್ಮಾವಲೋಕನಕ್ಕೆ ಇದು ಸಕಾಲ ಎಂದು ಹಾಸ್ಯ ಕಲಾವಿದ ಗೋಪಾಲ ಹೂಗಾರ ಹೇಳಿದರು.
ಪಟ್ಟಣದ ಓಸ್ವಾಲ್ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳ ಜನಪದ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಹುತೇಕ ಕಡೆಗಳಲ್ಲಿ ಅಶ್ಲೀಲ ಅರ್ಥ ಬರುವ ಹಾಡುಗಳನ್ನೇ ಜನರು ಕೇಳುವಾಗ ಕಲಾವಿದ ಅನಿವಾರ್ಯವಾಗಿ ಹಾಡಲೇಬೇಕಾಗುತ್ತದೆ.ಉತ್ತರ ಕರ್ನಾಟಕ ಭಾಗದ ಕಲಾವಿದರು ಈಚೇಗೆ ಜಾಗೃತಿ ಮೂಡಿಸುತ್ತಿದ್ದು ಭಾಗಶಃ ಅಶ್ಲೀಲತೆ ಹಾಡುಗಳಿಗೆ ಕಡಿವಾಣ ಬೀಳುತ್ತಿರುವುದು ಸಮಾಧಾನ ತರಿಸುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ಎಸ್.ಹೂಗಾರ ಮಾತನಾಡಿ, ಕೆಟ್ಟ ಅರ್ಥ ಬರುವ ,ಟ್ರ್ಯಾಕ್ಟರ್ಗಳಲ್ಲಿ ಹಾಡುಗಳನ್ನು ಕೇಳಿದಾಗ ನೈಜ ಜಾನಪದ ಸಂಸ್ಕೃತಿ ಮರೆಯಾಗಿರುವುದು ನೋವು ತರಿಸುತ್ತದೆ.ನಿಜವಾದ ಜಾನಪದ ಹಾಡುಗಳನ್ನು ಸಮಾಜಕ್ಕೆ ಹೆಚ್ಚು ಪರಿಚಯಿಸಬೇಕಾಗಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಆರ್.ಮುಲ್ಲಾ ಮಾತನಾಡಿ, ಕಲಾವಿದರಕು ಒಳ್ಳೆಯ ಹಾಡುಗಳನ್ನೇ ಹಾಡಬೇಕು ಎಂದರು.ಇನ್ನೋರ್ವ ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಮಾತನಾಡಿದರು.ಕೋಳೂರಿನ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆರ್ಚಕ ಸಂತೋಸ್ವಾಮಿ ಹಿರೇಮಠ,ಕಲಾವಿದ ವೀರೇಶ ಹಿರೇಗೌಡ್ರ,ಕಲಾವಿದರ ಸಂಘದ ಅಧ್ಯಕ್ಷ ಮುನೀರ ಅವಟಗೇರಿ, ಉಪಾಧ್ಯಕ್ಷ ಎಸ್.ಕೆ.ಘಾಟಿ,ಪ್ರಧಾನ ಕಾರ್ಯದರ್ಶಿ ಡಿ.ಎಲ್.ಮಮದಾಪೂರ,ಜಂಟಿ ಕಾರ್ಯದರ್ಶಿಭರತ್ ಉಪ್ಪಲದಿನ್ನಿ,ಖಜಾಂಚಿ ಹಣಮಂತ ಮಹಾಲಿಂಗಪೂರ,ಪತ್ರಿಕಾ ಪ್ರತಿನಿಧಿ ಸಿದ್ದು ಚಲವಾದಿ,ಸದಸ್ಯರಾದ ವಿನಾಯಕ ಭಟ್,ಶರಣು ಅಮರಣ್ಣವರ,ಪ್ರದೀಪ ದಾಸರ,ಶಾರದಾ ಬಿದರಕುಂದಿ ಇದ್ದರು.
ಸಿದ್ದು ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿದರು.ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಪಂಡಿತ ಪುಟ್ಟರಾಜ ಗವಾಯಿಗಳ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.







