ಮುದ್ದೇಬಿಹಾಳ : ಕಡಿಮೆ ಸಂಖ್ಯೆಯಲ್ಲಿರುವ ಸಮಾಜದವರ ಶರಣರು,ಮಹಾನ್ ದಾರ್ಶನಿಕರ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲ ಅಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಗೌರವ ಸಲ್ಲಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎ.ಗಣೇಶ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಹಾಗೂ ಶರಣ ನೂಲಿಯ ಚಂದಯ್ಯನವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ದೊಡ್ಡ ಶರಣರು,ನಾಯಕರ ಜಯಂತಿ ಕಾರ್ಯಕ್ರಮಗಳಿಗೆ ಅಷ್ಟೇ ಅಧಿಕಾರಿಗಳು ಆದ್ಯತೆ ಕೊಡುವ ಸಂಪ್ರದಾಯಕ್ಕೆ ಕಡಿವಾಣ ಹಾಕಿ ಎಲ್ಲ ಜಾತಿ,ಜನಾಂಗದವರ ಜಯಂತಿ ಕಾರ್ಯಕ್ರಮಗಳನ್ನು ಸಮಾನವಾಗಿ ಕಾಣಬೇಕು ಎಂದರಲ್ಲದೇ ಆರ್ಯ ಈಡಿಗ ಹಾಗೂ ಭಜಂತ್ರಿ ಸಮಾಜದಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ,ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ತಾಲ್ಲೂಕು ಆಡಳಿತದಿಂದ ಮಾಡಬೇಕು ಎಂದು ವಿನಂತಿಸಿದರು.
ನೂಲಿಯ ಚಂದಯ್ಯ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗೇಶ ಭಜಂತ್ರಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ನಮ್ಮ ಶರಣರ ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಿಸಲು ತಾಲ್ಲೂಕು ಆಡಳಿತದಿಂದ ಆಗುತ್ತಿಲ್ಲ.ಕೇಳಿದರೆ ಸಿಬ್ಬಂದಿ ನೆಪಗಳನ್ನು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಜಯಂತಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ ಬಿ.ಎಸ್.ಮುದ್ದೇಬಿಹಾಳ ಅವರ ಮೇಲೆ ಹರಿಹಾಯ್ದರು.
ಶಿರಸ್ತೇದಾರ ಎಂ.ಎಸ್.ಬಾಗೇವಾಡಿ ಮಾತನಾಡಿ, ಆ.28 ರಂದು ಬ್ರಹ್ಮಶ್ರೀ ನಾರಾಯಣಗುರು ಹಾಗೂ ನೂಲಿಯ ಚಂದಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.ಎರಡೂ ವೃತ್ತಗಳನ್ನು ಅಲಂಕರಿಸಿ ವಿದ್ಯುತ್ ದೀಪಾಲಂಕಾರ ಮಾಡಲು ಪುರಸಭೆಯವರು ಕ್ರಮ ಕೈಗೊಳ್ಳುತ್ತಾರೆ.ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಮಾಡಿಸುವುದು,ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕೊಡುವ ಕಾರ್ಯದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಯುವ ಮುಖಂಡ ಉದಯ ರಾಯಚೂರ ಮಾತನಾಡಿದರು.ಸಭೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್,ಪಶು ಆಸ್ಪತ್ರೆಯ ವೈದ್ಯ ಡಾ.ಸುರೇಶ ಭಜಂತ್ರಿ,ಉಪ ನೋಂದಣಾಧಿಕಾರಿ ಸಚೀನ ಖೈನೂರ, ಟಿ.ವಿಜಯಭಾಸ್ಕರ್,ಶಿಕ್ಷಕ ಟಿ.ಡಿ.ಲಮಾಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.







