ಮುದ್ದೇಬಿಹಾಳ : ಕೆಬಿಜೆಎನ್ಎಲ್ ಅಡಿ ನಿರ್ಮಿಸಲಾದ ಕಾಲುವೆ ಸಂಖ್ಯೆ 16ಎ- ಲ್ಯಾಟರಲ್ ನಂ.2 ಕಾಲುವೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸಂಬoಧಿಸಿದoತೆ ಎರಡು ದಶಕಗಳು ಕಳೆದರೂ ಈವರೆಗೂ ಬಾಧಿತ ರೈತರಿಗೆ ಯಾವುದೇ ರೀತಿಯಿಂದ ಪರಿಹಾರ ದೊರೆತಿಲ್ಲ.ಅಧಿಕಾರಿಗಳು ಪರಿಹಾರ ದೊರಕಿಸಿಕೊಡಬೇಕು ಎಂದು ತಾಲ್ಲೂಕಿನ ಮದರಿ ಮತ್ತು ಗರಸಂಗಿ ಗ್ರಾಮದ ರೈತರು ಕೆಬಿಜೆಎನ್ಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಹುಡ್ಕೋದಲ್ಲಿರುವ ಕೆಬಿಜೆಎನ್ಎಲ್ ಎಎಲ್ಬಿಸಿ ವಿಭಾಗ-3 ಕಚೇರಿಗೆ ಆಗಮಿಸಿದ್ದ ರೈತರು, 16-09-2020 ಮತ್ತು 29-05-2025ರಂದು ಮದರಿ ಮತ್ತು ಗರಸಂಗಿ ಗ್ರಾಮದ ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.ಆದರೆ ಈವರೆಗೂ ಬಿಡಿಗಾಸು ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಸದರಿ ಇಲಾಖೆಯ ಅಧಿಕಾರಿಯೊಬ್ಬರು ಓರ್ವ ಖಾಸಗಿ ವ್ಯಕ್ತಿಯನ್ನು ಗ್ರಾಮಕ್ಕೆ ಕಳುಹಿಸಿ ರೈತರಿಗೆ ಪರಿಹಾರ ನೀಡಲು ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಲು ತಲಾ 500 ರೂ.ಗಳನ್ನು ರೈತರಿಂದ ವಸೂಲಿ ಮಾಡಿಸಿಕೊಂಡಿದ್ದಾರೆ.ಆದರೆ ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ದೂರಿದರು.
ಮದರಿ ಗ್ರಾಮದ ರೈತರಾದ ಮಹಾಂತೇಶ ಉಗರಗೋಳ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಈ ವಿಷಯವಾಗಿ ಮನವಿ ಮಾಡುತ್ತ ಬಂದಿದ್ದೇವೆ.ಆದರೆ ಯಾರೂ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ.ಯಾವ ಜನಪ್ರತಿನಿಧಿ,ಅಧಿಕಾರಿಯಿಂದಲೂ ಉಪಯೋಗವಾಗಿಲ್ಲ ಎಂದು ದೂರಿದರಲ್ಲದೇ ಸದ್ಯಕ್ಕೆ ಅಧಿಕಾರದಲ್ಲಿರುವ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಬಿರಾದಾರ ಅವರು ಪುನಃ ದಾಖಲೆಗಳನ್ನು ಒದಗಿಸಲು ತಿಳಿಸಿದಂತೆ ಮತ್ತೆ ರೈತರೇ ತಮ್ಮ ಸ್ವಂತ ಹಣ ಖರ್ಚು ಮಾಡಿ ಕಾಲುವೆಗೆ ಜಮೀನು ಕಳೆದುಕೊಂಡ ರೈತರು ಅಗತ್ಯ ದಾಖಲೆಗಳನ್ನು ನೀಡಿದ್ದೇವೆ.ಒಂದು ತಿಂಗಳೊಳಗಾಗಿ ಪರಿಹಾರ ಒದಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.ಎಇ ಬಿ.ಎಸ್.ಕುಂಟೋಜಿ ಮನವಿ ಪತ್ರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ರೈತರಾದ ಮಲಕೇಂದ್ರರಾವ ನಾಡಗೌಡ್ರ, ಎಸ್.ಕೆ.ತೊಂಡಿಹಾಳ, ಸಂಗಮೇಶ ಹಿರೇಮಠ,ಶರಣಬಸವ ಗೌಡರ,ಮುತ್ತು ಕಾನಕ್ಕಿ,ಶಿವರಾಜ ಮೇಟಿ,ಗೌಡಪ್ಪ ತೊಂಡಿಹಾಳ,ಜಿAಕಪ್ಪ ಕಾನಕ್ಕಿ ಮೊದಲಾದವರು ಇದ್ದರು.
ಸಾಷ್ಟಾಂಗ ಹಾಕಲು ಮುಂದಾದ ರೈತರು:ಕಳೆದ ಇಪ್ಪತ್ತು ವರ್ಷಗಳಿಂದ ಕೆಬಿಜೆಎನ್ಎಲ್ನಿಂದ ಯಾವುದೇ ಪರಿಹಾರ ರೈತರಿಗೆ ಬಾರದ್ದರಿಂದ ಬೇಸರಗೊಂಡ ಗರಸಂಗಿ,ಮದರಿ ಗ್ರಾಮದ ರೈತರು ಶನಿವಾರ ಕೆಬಿಜೆಎನ್ಎಲ್ ಕಚೇರಿಗೆ ಮನವಿ ಸಲ್ಲಿಸುವ ಸಮಯದಲ್ಲಿ ಜೆಇ ಬಿ.ಎಸ್.ಕುಂಟೋಜಿ ಅವರಿಗೆ ಸಾಷ್ಟಾಂಗ ಹಾಕಲು ಮುಂದಾದ ಘಟನೆ ನಡೆಯಿತು.ಅಧಿಕಾರಿಗಳಿಗೆ ಮನವಿ ಕೊಟ್ಟು ಸಾಕಾಗಿದೆ.ಅದಕ್ಕೆ ಶಿರಸಾಷ್ಟಾಂಗ ಹಾಕಿ ನಮಗೆ ಪರಿಹಾರ ದೊರಕಿಸಿಕೊಡುವಂತೆ ವಿನಂತಿಸುತ್ತಿದ್ದೇವೆ ಎಂದು ರೈತರು ತಿಳಿಸಿದರು.
ಟಿಪ್ಪಣಿ ಉತಾರೆ ಎಂದರೆ ಗೊತ್ತಿಲ್ಲವೆಂದ ಅಧಿಕಾರಿ :
ಕೆ.ಬಿ.ಜೆ.ಎನ್.ಎಲ್ ಎ.ಎಲ್.ಬಿ.ಸಿ-3 ಕಚೇರಿಯ ಎಇ ಬಿ.ಎಸ್.ಕುಂಟೋಜಿ ಸದರಿ ಕಾಲುವೆಯಿಂದ ಬಾಧಿತ ರೈತರ ದಾಖಲೆಗಳನ್ನು ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಪಡೆದುಕೊಳ್ಳುವ ಸಮಯದಲ್ಲಿ ರೈತರು ಕೇಳಿದ ಪ್ರಶ್ನೆಗೆ ಏನೂ ಗೊತ್ತಿಲ್ಲ ಎಂದು ಉತ್ತರಿಸಿದ್ದು ಅಧಿಕಾರಿಯ ಬೇಜವಾಬ್ದಾರಿತನಕ್ಕೆ ಸಾಕ್ಷಿ ಒದಗಿಸಿತು.2019ರಿಂದ ಮುದ್ದೇಬಿಹಾಳ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಎಇಗೆ ಟಿಪ್ಪಣಿ ಉತಾರೆ ಎಂದರೆ ಗೊತ್ತಿಲ್ಲ ಎಂದರೆ ತಮಗೆ ಹೇಗೆ ಪರಿಹಾರ ದೊರೆಯುತ್ತದೆ ಎಂದು ರೈತರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.







