ಮುದ್ದೇಬಿಹಾಳ : ಹಸಿರು ಬಣ್ಣ,ಅರ್ಧ ಚಂದ್ರಾಕೃತಿ,ನಕ್ಷತ್ರ ಇವು ಮುಸ್ಲಿಂರ ಗುರುತುಗಳಲ್ಲ.ಅದೇ ರೀತಿ ಕೇಸರಿ ಬಣ್ಣವೂ ಹಿಂದೂಗಳದ್ದಲ್ಲ.ಎಲ್ಲ ಬಣ್ಣಗಳು ಯಾವುದೇ ಒಂದು ಸಮುದಾಯಕ್ಕೆ ಸೇರಿಲ್ಲ.ಲಾಂಛನಗಳನ್ನು ನಾವು ಮಾಡಿಕೊಂಡು ನಮ್ಮ ನಮ್ಮಲ್ಲಿ ಬೇಧಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂದು ಇಳಕಲ್ನ ಖ್ಯಾತ ಪ್ರವಚನಕಾರ ಲಾಲ್ಹುಸೇನ್ ಕಂದಗಲ್ ಹೇಳಿದರು.
ಪಟ್ಟಣದ ಸಾರಿಗೆ ಘಟಕದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವನ ಘನತೆ ಎತ್ತಿ ಹಿಡಿಯುವ ಕೆಲಸವನ್ನು ಪ್ರವಾದಿ ಮಹ್ಮದ ಪೈಗಂಬರ್ ಮಾಡಿದರು.ಯಾವ ಜನರು ಮುಸ್ಲಿಂರನ್ನು ಜಾತಿವಾದಕ್ಕೆ ಪ್ರೇರಿಪಿಸುವುದು,ಜಾತಿವಾದಕ್ಕೆ ಹೋರಾಡುವುದು,ಜಾತಿವಾದಕ್ಕೆ ಕುಮ್ಮಕ್ಕು ನೀಡುವವರು ನಿಜವಾದ ಮುಸ್ಲಿಂರಲ್ಲ ಎಂದು ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ.ಮಾನವತಾವಾದದ ಅಗತ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಪ್ರವಾದಿಗಳು ಮಾಡಿದ್ದಾರೆ.ನಾವೆಲ್ಲ ಸಹೋದರತ್ವ ಭಾವನೆಯಿಂದ ಸಾಗೋಣ.ಭಾಷೆಯ ಮಧ್ಯೆ ತಾರತಮ್ಯ,ಬಣ್ಣದ ಮೇಲೆ ತಾರತಮ್ಯ ಮಾಡಬೇಡಿ.ಜಾತಿಯ ಮೇಲೆ ಅಳೆಯದೇ ನೀತಿಯ ಮೇಲೆ ಬದುಕು ನಡೆಸಬೇಕು ಎಂದರು.
ನಮಾಜು ಮಾಡುವ ಕೈಗಳಿಗಿಂತ ದುಡಿದು ತಿನ್ನುವ ಕೈಗಳು ಶ್ರೇಷ್ಠ ಎಂದು ಪ್ರವಾದಿ ಮಹ್ಮದ ಅವರು ತಿಳಿಸಿದ್ದಾರೆ.ಮನುಷ್ಯನ ಮನಸ್ಸಿನ ಸಂಕುಚಿತತೆಯನ್ನು ಹೊಡೆದು ಹಾಕಬೇಕು. ವೇದ,ಬೌದ್ಧ, ಜೈನ,ಬೈಬಲ್,ದಾಸ,ವಚನ ಸಾಹಿತ್ಯ,ಸಿದ್ಧಾಂತ ಶಿಖಾಮಣಿಂiÀi ಗ್ರಂಥಗಳು ಮನುಷ್ಯತ್ವವನ್ನು ಸಾರುತ್ತವೆ.ಯಾವುದೇ ಪ್ರಚೋದನೆಗೆ ಒಳಗಾಗುವುದು ಬೇಡ.ಯಾರು ನನ್ನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾನೆಯೋ ಅವನೇ ನನ್ನ ಗುರು.ಯಾರು ನನ್ನನ್ನು,ನನಗೆ ಜಾತಿಯ ಮೇಲೆ ಗುರುತಿಸುತ್ತಾನೆಯೋ ಅವನೇ ನನ್ನ ವೈರಿ ಎಂದು ಭಾವಿಸಬೇಕು ಎಂದು ಪ್ರವಾದಿಯವರು ತಿಳಿಸಿದ್ದಾರೆ ಎಂದು ಕಂದಗಲ್ ಹೇಳಿದರು.
ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ ಮಾತನಾಡಿ, ಹಿಂದೂ ಮುಸ್ಲಿಂರು ಭಾವೈಕ್ಯತೆಯಿಂದ ಸಾಗುವ ಹಬ್ಬಗಳು ಸಹೋದರತೆ,ಭ್ರಾತೃತ್ವವನ್ನು ಬೆಳೆಸುತ್ತವೆ.ಜಾತಿ ಜಾತಿಗಳೆಂದು ಹೊಡೆದಾಡದೇ ಎಲ್ಲರೂ ಒಂದೇ ಭಾವನೆಯಿಂದ ಜೀವನ ನಡೆಸಿದಾಗ ಸಮಾಜದಲ್ಲಿ ನೆಮ್ಮದಿ ಹರಡುತ್ತದೆ ಎಂದರು.ಸಾರಿಗೆ ಘಟಕದ ಲೆಕ್ಕಾಧಿಕಾರಿ ಸಮಿ, ಪಾರುಪತ್ತೆದಾರ ವೆಂಕಟೇಶ,ಎಟಿಎಸ್ ವಿಠ್ಠಲ ಚವ್ಹಾಣ,ಕಾರ್ಮಿಕ ಮುಖಂಡ ಸಾಹೇಬಲಾಲ್ ಪಟೇಲ್,ಜಮಿಯತೆ ಇಸ್ಲಾಮಿ ಹಿಂದ್ ಸಂಚಾಲಕ ನೂರೇನಬಿ ನದಾಫ, ಎಸ್.ಆರ್.ಮುಲ್ಲಾ ಇದ್ದರು.







