ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ತಾಲ್ಲೂಕು ಯರಗಲ್ ಗ್ರಾಮದಲ್ಲಿ ಸನ್ 2025-26ನೆ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಯರಗಲ್ ಗ್ರಾಮದಿಂದ ದೇವೂರ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಿಂದಿನ ಸರ್ಕಾರದವರು ಆರ್ಥಿಕ ಶಿಸ್ತು ಕಾಪಾಡದೇ ಮನಬಂದOತೆ ಬಾಕಿ ಉಳಿಸಿ ಹೋಗಿದ್ದರಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಅದನ್ನು ಪಾವತಿಸುವ ಕೆಲಸ ಆಗಿದೆ.ಶಾಸಕರಿಗೆ ವಿಶೇಷ ಅನುದಾನವನ್ನು ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದರಿಂದ ಸದ್ಯಕ್ಕೆ ಹೊಸ ಕೆಲಸಗಳಿಗೆ ಅನುದಾನ ಸಿಗುವುದು ಕಷ್ಟ.ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡುವುದನ್ನು ಮುಂದುವರೆಸಬೇಕು ಎಂದರು.
ಗ್ರಾಪO ಮಾಜಿ ಸದಸ್ಯ ಬಸವರಾಜ ಡಮನಾಲ ಮಾತನಾಡಿ, ಯರಗಲ್ ದಿಂದ ದೇವೂರ ಗ್ರಾಮಕ್ಕೆ ಹೋಗುವ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಬಹಳ ದಿನಗಳಿಂದ ಇತ್ತು.ಶಾಸಕರ ವಿಶೇಷ ಪ್ರಯತ್ನದಿಂದ ಈ ಕೆಲಸ ಆಗುತ್ತಿರುವುದು ಎಲ್ಲರ ಹರ್ಷಕ್ಕೆ ಕಾರಣವಾಗಿದೆ ಎಂದರು.
ಕೆ.ಆರ್.ಡಿ.ಎಲ್ ಜೆಇ ನಾಗರಾಜ ಬಿರಾದಾರ ಮಾತನಾಡಿ, 4 ಕೋಟಿ ರೂ.ವೆಚ್ಚದಲ್ಲಿ 8 ಕಿ.ಮೀ ರಸ್ತೆ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಲಾಜಿ ಸಕ್ಕರೆ ನಿರ್ದೇಶಕರಾದ ರಾಹುಲಗೌಡ ಪಾಟೀಲ, ಶ್ರೀನಿವಾರ ಅರಕೇರಿ, ಗ್ರಾಮದ ಮುಖಂಡರಾದ ಎಂ.ಎಸ್.ದೇಶಮುಖ, ವಿ.ಎಸ್.ಕಡಿ,ಕೆ.ಆರ್.ಡಿ.ಎಲ್ ಎಇ ವಿಶಾಲ ಬರ್ಹಾನಪುರ,ಗುತ್ತಿಗೆದಾರ ಮುತ್ತಿನಶೆಟ್ಟಿ ಗೂಳಿ, ಮಾರುತಿ ಗುರವ ಮೊದಲಾದವರು ಇದ್ದರು.
ಇದೇ ಸಮಯದಲ್ಲಿ ಯರಗಲ್ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗಳ ದುರಸ್ತಿಗೆ ,ಎಸ್.ಸಿ ಕಾಲೋನಿಯಲ್ಲಿ ಸಮುದಾಯ ಭವನಕ್ಕೆ ಅನುದಾನ ಒದಗಿಸುವಂತೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.







