ಮುದ್ದೇಬಿಹಾಳ : ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾಟರ್ಸ್ನಲ್ಲಿ ಪೊಲೀಸ್ ಠಾಣೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾರ್ಟರ್ಸ್ನ ಸ್ಥಳವನ್ನು ಶನಿವಾರ ಪೊಲೀಸ್ ಅಧಿಕಾರಿಗಳು,ನಗರದ ಗಣ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸರಕಾರ ಬಜೆಟ್ನಲ್ಲಿ ಘೋಷಿಸಿರುವಂತೆ ಗ್ರಾಮೀಣ ಪೊಲೀಸ್ ಠಾಣೆ ಆರಂಭಿಸಲಾಗುವುದು ಎಂದು ತಿಳಿಸಿದೆ.ನಾನು ಯಾವ ಠಾಣೆ ಎಲ್ಲಿರಬೇಕು ಎಂಬುದನ್ನು ಹೇಳುವುದಿಲ್ಲ.ಕೆಲವು ಇಲಾಖೆಗಳ ಆಡಳಿತದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ.ಇಲ್ಲಿನ ಜಾಗೆಯನ್ನು ಪೊಲೀಸ್ ಇಲಾಖೆಯವರಿಗೆ ನೀಡಲಾಗುತ್ತಿದ್ದು ಅದನ್ನು ಸಮರ್ಪಕ ರೀತಿಯಲ್ಲಿ ತಾಲ್ಲೂಕು,ನಗರದ ಜನರಿಗೆ ಅನುಕೂಲ ಆಗುವಂತೆ ಬಳಕೆ ಮಾಡಿಕೊಳ್ಳಲು ತಿಳಿಸಿದ್ದೇನೆ ಎಂದು ಹೇಳಿದರು.
ಅಬಕಾರಿ ಹಾಗೂ ಪೊಲೀಸ್ ಇಲಾಖೆ ಮಧ್ಯೆ ಜಾಗೆಯ ಕುರಿತು ಇದ್ದ ವಿವಾದದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಈ ಹಿಂದೆ ಅಬಕಾರಿ ಪೊಲೀಸ್ ಎರಡೂ ಇಲಾಖೆಗಳು ಒಂದೆ ಆಗಿದ್ದವು.ನಾನು ಶಾಸಕನಾಗಿದ್ದ ಅವಧಿಯಲ್ಲಿ ಹಳೇ ತಹಶೀಲ್ದಾರ ಕಚೇರಿಯಲ್ಲಿ ಪೊಲೀಸ್ ಠಾಣೆ ಆರಂಭಿಸಲಾಗಿತ್ತು.ಸದ್ಯದ ಈ ಜಾಗೆಯಲ್ಲಿ ಅಬಕಾರಿ ಇಲಾಖೆಯವರು ಕೆಲಸ ಮಾಡುವಂತೆ ತಿಳಿಸಿದ್ದೆ.ಬದಲಾದ ಸನ್ನಿವೇಶದಲ್ಲಿ ಎರಡು ಇಲಾಖೆಗಳು ಪ್ರತ್ಯೇಕಗೊಂಡಿದ್ದು ಊರಿನ ಹೃದಯ ಭಾಗವಾಗಿರುವ ಈ ಸ್ಥಳದಲ್ಲಿ ಜನರ ಭದ್ರತೆ,ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಠಾಣೆಯನ್ನು ಇಲ್ಲಿ ಆರಂಭಿಸುವುದು ಸೂಕ್ತ ಎಂದು ನಿರ್ಧರಿಸಿ ಈ ತೀರ್ಮಾನ ಮಾಡಲಾಗಿದೆ.ಅಧಿಕಾರಿಗಳು,ಗುತ್ತಿಗೆದಾರರ ಮನವೊಲಿಸಿ ಸಾಧ್ಯವಾದಷ್ಟು ಬೇಗನೇ ಇಲ್ಲಿ ಠಾಣೆ ಆರಂಭಕ್ಕೆ ಕ್ರಮ ಕೈಗೊಳ್ಳಲು ಇಲಾಖೆಯವರಿಗೆ ತಿಳಿಸಿರುವುದಾಗಿ ಹೇಳಿದರು.
ಪಿಎಸ್ಐ ಸಂಜಯ ತಿಪರೆಡ್ಡಿ ಮಾತನಾಡಿ, ಇಳಕಲ್,ಇಂಡಿ ಭಾಗದಲ್ಲಿ ಪೊಲೀಸ್ ಠಾಣೆಗಳು ಬಸ್ ನಿಲ್ದಾಣದ ಸಮೀಪದಲ್ಲಿಯೇ ಇವೆ.ಈಗಿರುವ ಮುದ್ದೇಬಿಹಾಳ ಪೊಲೀಸ್ ಠಾಣೆಯನ್ನು ಗ್ರಾಮೀಣ ಠಾಣೆಗೆ ಬಿಟ್ಟುಕೊಟ್ಟು ಬಸ್ ನಿಲ್ದಾಣದ ಪಕ್ಕದಲ್ಲಿರುವ ಈ ಜಾಗೆಯಲ್ಲಿ ಮುದ್ದೇಬಿಹಾಳದ ನಗರ ಪೊಲೀಸ್ ಠಾಣೆಯನ್ನು ಆರಂಭಿಸಿದರೆ ಜನರಿಗೆ ಅನುಕೂಲವಾಗಲಿದ್ದು ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಗಣ್ಯರಾದ ಎಂ.ಬಿ.ನಾವದಗಿ,ಕೆಪಿಸಿಸಿ ಸದಸ್ಯ ರಮೇಶ ಓಸ್ವಾಲ್,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸದು ಮಠ, ಡಾ.ವಿಜಯಕುಮಾರ ಗೂಳಿ,ಲಕ್ಷö್ಮಣ ಲಮಾಣಿ ಮೊದಲಾದವರು ಇದ್ದರು.







