ಮುದ್ದೇಬಿಹಾಳ : ಭಾರತದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಆಗಿದ್ದರೆ,ಡಾ.ಅಂಬೇಡ್ಕರ್ ಅವರು ಈ ದೇಶದ ಆತ್ಮವಾಗಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಖಂಡ ಭಾರತ ಒಂದಾಗಿ ಉಳಿಯಲು ಮಾನವ ಧರ್ಮದ ಪರವಾಗಿ ಅಂಬೇಡ್ಕರ್ ಧ್ವನಿ ಎತ್ತಿದ್ದಾರೆ.ಅಂಬೇಡ್ಕರ್ ಅವರ ಬದುಕು ಪ್ರತಿ ದಿನ ಅಭ್ಯಾಸ ಮಾಡುವಂತಹದ್ದಾಗಿದೆ.ಅವರ ಚಿಂತನೆಗಳನ್ನು ಓದಬೇಕಿದೆ.ಒಂದು ದಿನದ ಆಚರಣೆ ಆಗಬಾರದು.ನಾವೆಲ್ಲರೂ ಅವರ ಅನುಯಾಯಿಗಳು ಎಂದು ಹೇಳುವವರು ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಅವರಿಗೆ ದೊಡ್ಡ ಗೌರವ ಕೊಟ್ಟ ಹಾಗಾಗುತ್ತದೆ ಎಂದು ಹೇಳಿದರು.
ಒಳಮೀಸಲಾತಿ ಕುರಿತು 2014 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು.ರಾಜ್ಯ ಸರ್ಕಾರ ಸರ್ವೆ ನಡೆಸಿ ವರದಿ ಸಲ್ಲಿಸಲು ತಿಳಿಸಿದಾಗ ಈವರೆಗೂ ಅಂತಿಮ ತೀರ್ಮಾನ ಕೈಗೊಳ್ಳಲು ಆಗುತ್ತಿಲ್ಲ.ಒಳಮೀಸಲಾತಿ ಕುರಿತು ಎಡಬಲ ಎನ್ನದೇ ಅಂತಿಮ ತೀರ್ಮಾನಕ್ಕೆ ಬನ್ನಿ.ನಿಮಗೆ ದಾರಿ ತಪ್ಪಿಸುವ ಕೆಲಸ ನಡೆದಿದೆ.ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ದೇವರ ಹೆಸರಲ್ಲಿ ಬಲಿ ಕೊಡಬೇಡಿ.ಕುಡಿತ,ಕುಣಿತ ಬಿಡಿ. ಒಬ್ಬನನ್ನು ಮಣಿಸಲು ಮತ್ತೊಬ್ಬರ ದಾಳವಾಗಿ ನೀವು ಬಳಕೆಯಾಗಬೇಡಿ.ಶಾಂತಿಪ್ರಿಯರಾಗಬೇಕು ಎಂದು ಹೇಳಿದರು.
ತಾಳಿಕೋಟಿ ಖಾಸ್ಗತೇಶ್ವರ ಪಪೂ ಕಾಲೇಜಿನ ಉಪನ್ಯಾಸಕಿ ಡಾ.ಸುಜಾತಾ ಚಲವಾದಿ ಮಾತನಾಡಿ, ಅಂಬೇಡ್ಕರ್ ಜ್ಞಾನದ ಪ್ರತೀಕ.ಬುದ್ದ,ಬಸವ,ಅಂಬೇಡ್ಕರ್ ಅವರು ಸಮಾನತೆಯನ್ನು ಬೋಧಿಸಿದ್ದಾರೆ.ಅವರ ಬರಹ,ಭಾಷಣ,ಪುಸ್ತಕಗಳನ್ನು ಮನೆಯಲ್ಲಿಟ್ಟಾಗ,ಅವರನ್ನು ಓದಿದಾಗ ಪ್ರಬುದ್ಧ ಭಾರತ ಕನಸು ನನಸು ಮಾಡಲು ಸಾಧ್ಯವಿದೆ.ಇಂದಿಗೂ ಹಲವಡೆ ಸವರ್ಣಿಯರು ದಲಿತ ಜನಾಂಗದವರನ್ನು ಹೊಡೆದು ಹಾಕುತ್ತಿರುವ ವರದಿಗಳು ನಾವು ನೋಡುತ್ತಲೇ ಇದ್ದೇವೆ.ಮನುಷ್ಯ ಮುಖ್ಯನೋ ಧರ್ಮ ಮುಖ್ಯನೋ ಎಂಬ ಪ್ರಶ್ನೆ ಮೂಡುತ್ತದೆ.ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಲು ತಮ್ಮ ಸಚಿವ ಸ್ಥಾನವನ್ನು ತ್ಯಾಗ ಮಾಡಿದ್ದವರು ಅಂಬೇಡ್ಕರ್ ಅವರಾಗಿದ್ದರು.್ತಅಂಬೇಡ್ಕರ್ ಎಂಬುದು ನಮ್ಮ ಬದುಕು.ಅವರು ಸಂವಿಧಾನ ಬರೆದಿಲ್ಲ ಎನ್ನುವ ಗುಂಪು ಒಂದು ಕಡೆಯಾದರೆ ಅದನ್ನು ಉಳಿಸುವ ಗುಂಪು ಅವರ ವಾರಸುದಾರರಾದ ನಾವು ಇದ್ದೇವೆ ಎಂದು ಹೇಳಿದರು.
ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ , ಭಾರತದ ದೇಶದಲ್ಲಿ ಒಂದು ಕಾಲದಲ್ಲಿ ಉಳ್ಳವರ ಸ್ವತ್ತಾಗಿದ್ದ ಮತದಾನದ ಹಕ್ಕನ್ನು ಸಾರ್ವತ್ರಿಕರಣಗೊಳಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.ಮಹಿಳೆಯರಿಗೆ ಸಮಾನ ಹಕ್ಕು,ನೀರಾವರಿ ಯೋಜನೆಗಳಿಗೆ ನೀಲನಕ್ಷೆ ಸೇರಿದಂತೆ ಹಲವು ಪರಿಣಾಮಕಾರಿ ಕಾರ್ಯಗಳನ್ನು ಅವರು ಕೈಗೊಂಡಿದ್ದರು.ಆದರೆ ಅಂದಿನ ಸರ್ಕಾರ ಅವರ ಮರಣಾನಂತರ ಅವರ ಸ್ಮಾರಕ ನಿರ್ಮಿಸಲು ದೆಹಲಿಯಲ್ಲಿ ಜಾಗೆ ಕೊಡಲಿಲ್ಲ.ಅವರ ಅಂತ್ಯಕಾಲದಲ್ಲಿ ಅತ್ಯಂತ ಅವಮಾನಕಾರಿಯಾಗಿ ನಡೆಸಿಕೊಳ್ಳಲಾಗಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ.ಅದನ್ನು ಯುವ ಜನಾಂಗ ಅರಿತುಕೊಳ್ಳಬೇಕು ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ತಹಶೀಲ್ದಾರ್ ಕೀರ್ತಿ ಚಾಲಕ್,ತಾಪಂ ಇಒ ಸಂಗನಗೌಡ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ,ಸಿಪಿಐ ಮೊಹ್ಮದ ಫಸಿವುದ್ದೀನ್,ಪ್ರಮುಖರಾದ ಎಂ.ಬಿ.ನಾವದಗಿ, ಸತೀಶ ಓಸ್ವಾಲ್, ಎ.ಗಣೇಶ ನಾರಾಯಣಸ್ವಾಮಿ, ವಾಯ್.ಎಚ್.ವಿಜಯಕರ್,ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸಂತಿ ಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಬಿಇಒ ಬಿ.ಎಸ್.ಸಾವಳಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ದಲಿತಪರ ಸಂಘಟನೆ ಹೋರಾಟಗಾರರಾದ ಚೆನ್ನಪ್ಪ ವಿಜಯಕರ್, ಪ್ರಕಾಶ ಚಲವಾದಿ, ದೇವರಾಜ ಹಂಗರಗಿ,ಹರೀಶ ನಾಟೀಕಾರ,ಶರಣು ಚಲವಾದಿ,ಬಲಭೀಮ ನಾಯ್ಕಮಕ್ಕಳ ಮೊದಲಾದವರು ಉಪಸ್ಥಿತರಿದ್ದರು.ಇದೇ ವೇಳೆ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ಹಾಗೂ ರಾಷ್ಟçಮಟ್ಟದ ಕ್ರೀಡೆಯಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದ ಢವಳಗಿಯ ಎಂ.ಕೆ.ಗುಡಿಮನಿ ಅವರನ್ನು ಸನ್ಮಾನಿಸಲಾಯಿತು.ಟಿ.ಡಿ.ಲಮಾಣಿ ನಿರೂಪಿಸಿದರು.ಸಿ.ಜಿ.ವಿಜಯಕರ್ ವಂದಿಸಿದರು.ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಶಾಬಿ ಟಪಾಲ ಗಣ್ಯರಿಗೆ ಬುದ್ದನ ಮೂರ್ತಿಗಳನ್ನು ನೀಡಿದರು.
ಅಂಬೇಡ್ಕರ್ ಸಭಾಭವನದಲ್ಲಿ ಜಯಂತಿ ಆಚರಿಸಿ: ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ ಸಭಾಂಗಣದಲ್ಲಿ ಆಚರಿಸಲು ಅಧಿಕಾರಿಗಳು ಕ್ರಮ ಜರುಗಿಸಬೇಕಿತ್ತು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.ಇದಕ್ಕೆ ಸಭೆಯಲ್ಲಿದ್ದ ದಲಿತಪರ ಸಂಘಟನೆ ಮುಖಂಡರು, ಅಂಬೇಡ್ಕರ್ ಸಭಾಭವನ ಪ್ರತಿಧ್ವನಿಸುತ್ತದೆ.ಕಾರ್ಯಕ್ರಮದಲ್ಲಿ ಯಾರು ಏನು ಮಾತನಾಡುತ್ತಾರೆಯೋ ಅದು ಸ್ಪಷ್ಟವಾಗಿ ಕೇಳಿಸುವುದಿಲ್ಲ.ಅದನ್ನು ಸರಿಪಡಿಸಿದ ನಂತರ ಜಯಂತಿ ಆಚರಣೆಗೆ ಮುಂದಾಗಿ ಎಂದು ಹೇಳುತ್ತಿದ್ದಂತೆ ಶಾಸಕರು, ಕೂಡಲೇ ಅಧಿಕಾರಿಗಳು ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಸೂಚಿಸಿದರು.
ದೀಪದ ಬುಡದಲ್ಲೇ ಕತ್ತಲು:
ಸಂವಿಧಾನ ಶಿಲ್ಪಿ, ಎಲ್ಲರಿಗೂ ಸಮಾನತೆ ಕಲ್ಪಿಸಲು ಹೋರಾಡಿದ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಶಾಸಕರಾದಿಯಾಗಿ ಎಲ್ಲ ಗಣ್ಯರು ವೇದಿಕೆಯಲ್ಲಿ ಭಾಷಣ ಬಿಗಿದರು.ಆದರೆ ಮುದ್ದೇಬಿಹಾಳದ ಅಂಬೇಡ್ಕರ್ ವೃತ್ತದ ಕೆಲಸ ಇನ್ನೂ ಬಾಕಿ ಉಳಿದಿದ್ದು ಅದನ್ನು ಪೂರ್ಣಗೊಳಿಸುವ ಗೋಜಿಗೆ ಅಧಿಕಾರಿಗಳಾಗಲೀ,ಪುರಸಭೆಯವರಾಗಲೀ ಮುಂದಾಗದೇ ಇರುವುದು ದಲಿತಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಯಿತು.ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಿರುವ ಕಟ್ಟೆಯ ಸುತ್ತಲೂ ಈವರೆಗೂ ಟೈಲ್ಸ್ ಅಳವಡಿಸಲು ಆಗದಿರುವುದು ದುರಂತದ ಸಂಗತಿ ಎಂದು ಹೋರಾಟಗಾರರೊಬ್ಬರು ಪತ್ರಿಕೆಯ ಎದುರಿಗೆ ಬೇಸರ ಹೊರ ಹಾಕಿದರು.ವೃತ್ತದ ಕೆಲಸ ಮೂರು ವರ್ಷಗಳ ಹಿಂದೆ ಎಷ್ಟಿತ್ತೋ ಅಷ್ಟೇ ಈಗಲೂ ಇದೆ.ಇದೊಂದು ರೀತಿ ದೀಪದ ಬುಡದಲ್ಲೆ ಕತ್ತಲು ಎಂಬAತೆ ಎಂಬ ಮಾತುಗಳು ಕೇಳಿ ಬಂದವು.







