ಮುದ್ದೇಬಿಹಾಳ : ಹಿಂದುಳಿದ,ಬಡವರ ಮಕ್ಕಳಿಗೆ ಉಚಿತ,ರಿಯಾಯಿತಿ ಶಿಕ್ಷಣ ಕೊಟ್ಟು ಒಳ್ಳೆಯ ಫಲಿತಾಂಶ ತಂದ ಮಕ್ಕಳನ್ನು ಕೆಲವು ವಿದ್ಯಾಸಂಸ್ಥೆಯವರು ಸಂಪರ್ಕಿಸಿ ಅವರನ್ನು ತಮ್ಮ ವಿದ್ಯಾಸಂಸ್ಥೆಗಳಲ್ಲಿ ಉಚಿತವಾಗಿ ಓದಿಸುವ ಭರವಸೆ ನೀಡುತ್ತಿದ್ದು ಅದಕ್ಕೆ ಪಾಲಕರ ಮಾರು ಹೋಗಬಾರದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಶೇ.90-95ಕ್ಕೂ ಹೆಚ್ಚಿನ ಅಂಕ ಪಡೆದುಕೊಂಡ ವಿದ್ಯಾರ್ಥಿಗಳ ಪಾಲಕರನ್ನು ಸಂಪರ್ಕಿಸಿ ಅವರನ್ನು ತಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಳ್ಳಲು ಹಿಂಬಾಗಿಲಿನ ಮೂಲಕ ಶಿಕ್ಷಕರನ್ನು ಕಳಿಸಿ ತಮ್ಮ ವಿದ್ಯಾಸಂಸ್ಥೆಗಳ ಹೆಸರು ಮಾಡಿಕೊಳ್ಳುತ್ತಾ ಕೆಲವರು ಹೊರಟಿದ್ದಾರೆ.ನಮ್ಮಲ್ಲೂ ಗುಣಮಟ್ಟದ ಶಿಕ್ಷಣವನ್ನು ಹೆಚ್ಚಿನ ಅಂಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತವಾಗಿಯೇ ಶಿಕ್ಷಣ ನೀಡುತ್ತೇವೆ.ಪಾಲಕರು ಇಲ್ಲಿ ಓದಿ ಬುದ್ಧಿವಂತರಾದ ಮಕ್ಕಳನ್ನು ಬೇರೆ ಶಾಲೆಗಳಿಗೆ ಪ್ರವೇಶ ಪಡೆದುಕೊಳ್ಳಲು ಕಳಿಸುವ ಮುನ್ನ ಆಲೋಚನೆ ಮಾಡಬೇಕು ಎಂದು ಸಲಹೆ ಮಾಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಕಿರಣ ಮದರಿ ಮಾತನಾಡಿ, ಪರೀಕ್ಷೆಯ ಸಮಯದಲ್ಲಿಯೇ ಹಿಂದಿ ಭಾಷೆಗೆ ಅಂಕಗಳ ಬದಲು ಗ್ರೇಡ್ ಪದ್ಧತಿ ಜಾರಿಗೊಳಿಸಲಾಗುವುದು ಎಂದು ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅಲ್ಪ ವ್ಯತ್ಯಾಸವಾಗಿದೆ.ಮುಂಬರುವ ವರ್ಷಗಳಲ್ಲಿ ನಮ್ಮ ಶಾಲೆಗಳಿಂದ ರಾಜ್ಯಮಟ್ಟದ ಸಾಧನೆ ತೋರುವಂತಹ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು ಸಿದ್ಧ ಮಾಡುವುದಾಗಿ ತಿಳಿಸಿದರು.
ಸಂಸ್ಥೆಯ ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ ಮಾತನಾಡಿ, ಕಳೆದ ಆರು ವರ್ಷಗಳಲ್ಲಿ ನಮ್ಮ ಶಾಲೆಯ ಫಲಿತಾಂಶ ಅತ್ಯುತ್ತಮವಾಗಿ ಬಂದಿದೆ.ಇನ್ನಷ್ಟು ಪ್ರಯತ್ನ ಮಾಡಿದ್ದರೆ ಒಳ್ಳೆಯ ಸ್ಥಾನದಲ್ಲಿ ವಿದ್ಯಾರ್ಥಿಗಳು ಕಾಣಿಸಿಕೊಳ್ಳುತ್ತಿದ್ದರು.ಆದರೂ ಇಂತಹ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳನ್ನು ಕರೆತಂದು ಗುಣಮಟ್ಟದ ಶಿಕ್ಷಣ ಶಿಕ್ಷಕರು ನೀಡಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು. ಸಂಸ್ಥೆಯ ನಿರ್ದೇಶಕರಾದ ಶ್ರೀದೇವಿ ಮದರಿ, ಸಲಹೆಗಾರರಾದ ರವಿ ಜಗಲಿ,ಬಸವರಾಜ ಗೂಡ್ಲಮನಿ, ಆಕಾಶ ಮದರಿ, ಅಭ್ಯುದಯ ಇಂಟರ್ನ್ಯಾಶನಲ್ ಶಾಲೆ ಮುಖ್ಯ ಗುರುಗಳಾದ ಪ್ರಶಾಂತ ಬಿರಾದಾರ, ಭೀಮಣ್ಣ ಪೂಜಾರಿ, ಅಜಿತ್ ಸರ್,ಅಡಳಿತ ಅಧಿಕಾರಿ ಗೀತಾ ಹುರಕಡ್ಲಿ,ಕಾಲೇಜಿನ ಪ್ರಾಂಶುಪಾಲ ಎಂ.ಎA.ಧನ್ನೂರ, ವಿರೇಶ ಹುಲಿಕೇರಿ ಇದ್ದರು.
ಫಲಿತಾಂಶ ಇಂತಿದೆ:
ಪಟ್ಟು ಪರೀಕ್ಷೆಗೆ ಕೂತಿದ್ದ 191 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಶೇ.95ಕ್ಕೂ ಅಧಿಕ 11,ಶೇ.90ಕ್ಕೂ ಅಧಿಕ 33,ಡಿಸ್ಟಿಂಕ್ಷನ್ 74,ಪ್ರಥಮ ದರ್ಜೆ 113,ಎರಡನೇ ಸ್ಥಾನ 4 ಪಡೆದುಕೊಂಡಿದ್ದಾರೆ.ಅದರಲ್ಲಿ ಶ್ರೀನಿಧಿ ಬಡಿಗೇರ 616 ಅಂಕ ಪಡೆದು ಶಾಲೆಗೆ ಪ್ರಥಮ ರಾಜ್ಯಕ್ಕೆ ಎಂಟನೇ ಸ್ಥಾನ,ಸಿದ್ರಾಯ ಬಾಲರೆಡ್ಡಿ 610 ಅಂಕ ಪಡೆದು ದ್ವಿತೀಯ,ಮಲ್ಲಪ್ಪ ಗುಂಡಕನಾಳ 609 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಶೇ.90ಕ್ಕೂ ಅಧಿಕ ಅಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ಸಂಸ್ಥೆಯಿOದ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸಂಸ್ಥೆಯ,ಶಾಲೆಯ ಬಗ್ಗೆ ವಿದ್ಯಾರ್ಥಿಗಳು,ಪಾಲಕರು ಅನಿಸಿಕೆ ಹಂಚಿಕೊOಡರು.







