ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳು ಈ ವರ್ಷವೂ 625ಕ್ಕೆ 625 ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಮೊದಲಿಗಳಾಗಿ ಹೊರಹೊಮ್ಮಿದ್ದು ಶಾಲೆ ಹಾಗೂ ತನ್ನನ್ನು ಹೆತ್ತವರ ಕೀರ್ತಿ ತಂದಿದ್ದಾಳೆ.
ಹುನಗುಂದ ತಾಲ್ಲೂಕಿನ ನಿವೃತ್ತ ಶಿಕ್ಷಕ ಬಸವರಾಜ ಕಂದಕೂರ ಹಾಗೂ ಇಲಕಲ್ ಶಿಕ್ಷಣದ ಇಲಾಖೆಯಲ್ಲಿ ಸಿಆರ್ಪಿ ಆಗಿ ಸೇವೆ ಸಲ್ಲಿಸುತ್ತಿರುವ ಗಿರಿಜಾ ಕಂದಕೂರ ಅವರ ಪುತ್ರಿ ಸೌಜನ್ಯಾ ಕಂದಕೂರ 625 ಅಂಕಗಳನ್ನು ಪಡೆದುಕೊಂಡು ಅದ್ವಿತೀಯ ಸಾಧನೆ ತೋರಿದ್ದಾಳೆ.
ದಾವಣಗೆರೆಯಲ್ಲಿದ್ದ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ದೂರವಾಣಿಯಲ್ಲಿ ಫಲಿತಾಂಶದ ಕುರಿತು ಮಾತನಾಡಿ, ನಮ್ಮ ಸಂಸ್ಥೆಯಿoದ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಸೌಜನ್ಯಾ ಕಂದಕೂರ ರಾಜ್ಯಕ್ಕೆ ಒಂದನೇ ಸ್ಥಾನ ಪಡೆದುಕೊಳ್ಳುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಕ ದೊರಕುತ್ತದೆ ಎಂಬುದನ್ನು ಮತ್ತೊಮ್ಮೆ ನಿರೂಪಣೆಯಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಮಾರ್ಗದರ್ಶಕರಾದ ನಾಗರಾಜಗೌಡ ಬಿರಾಜದಾರ ಮಾತನಾಡಿ, ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ,ವಸತಿ ವ್ಯವಸ್ಥೆ,ನುರಿತ ಶಿಕ್ಷಕ ವರ್ಗದವರಿದ್ದಾರೆ.ಕೆಲವು ಮಾಡುವ ಆರೋಪಗಳಿಗೆ ನಮ್ಮ ಸಂಸ್ಥೆಯಿoದ ದೊರೆಯುತ್ತಿರುವ ಫಲಿತಾಂಶವೇ ಉತ್ತರವಾಗಿದೆ ಎಂದು ತಿಳಿಸಿದರು. ಶಾಲೆಯ ಮುಖ್ಯಗುರು ಇಸ್ಮಾಯಿಲ್ ಮನಿಯಾರ್ ಮಾತನಾಡಿ, ಕಳೆದ ಆರು ವರ್ಷಗಳಿಂದ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಆಕ್ಸಫರ್ಡ್ ಪಾಟೀಲ್ಸ್ ಪ್ರೌಢಶಾಲೆಯಿಂದ ವಿದ್ಯಾರ್ಥಿಗಳು ಗಳಿಸುತ್ತಾ ಬರುತ್ತಿದ್ದಾರೆ.ಇದಕ್ಕೆ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ,ಆಡಳಿತಾಧಿಕಾರಿ ಅಮಿತಗೌಡ ಪಾಟೀಲ,ದರ್ಶನಗೌಡ ಪಾಟೀಲ,ವಿಜಯಕುಮಾರ ಪಾಟೀಲ ಅವರ ಪರಿಶ್ರಮ ಕಾರಣವಾಗಿದೆ.ನಿರಂತರವಾಗಿ ವಿದ್ಯಾರ್ಥಿಗಳ ಓದಿನ ಮೇಲೆ ನಿಗಾ ವಹಿಸುವುದು ಕಾರಣ ವಯಕ್ತಿಕ ಕಾಳಜಿಯ ಪರಿಣಾಮ ಈ ಫಲಿತಾಂಶ ಸಾಧ್ಯವಾಗಿದೆ ಎಂದರು.
ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದ ಆಕ್ಸಫರ್ಡ್ ಸಂಸ್ಥೆ ಆವರಣ:
ವಿದ್ಯಾರ್ಥಿನಿ ಸೌಜನ್ಯಾ ರಾಜ್ಯಕ್ಕೆ ಮೊದಲಿಗಳಾಗಿ ಬಂದಿದ್ದ ಖುಷಿಯನ್ನು ಹಂಚಿಕೊಳ್ಳಲು ಪಾಲಕರೊಂದಿಗೆ ಬಂದಿದ್ದ ವೇಳೆ ಮುಖ್ಯಶಿಕ್ಷಕ ಇಸ್ಮಾಯಿಲ್ ಮನಿಯಾರ್ ಇನ್ನೂ ಶಾಲೆಗೆ ಬಂದಿರಲಿಲ್ಲ.ಅವರು ಶಾಲೆಗೆ ಬರುತ್ತಲೇ ತಾವು ಅಂದುಕೊoಡಿದ್ದ ಗುರಿ ಸಾಧಿಸಿದ ಶಿಷ್ಯೆಯ ಸಾಧನೆಗೆ ಬೆನ್ನು ಚಪ್ಪರಿಸಿದರು.ಬಳಿಕ ಸೌಜನ್ಯಾ ಮುಖ್ಯಶಿಕ್ಷಕ ಇಸ್ಮಾಯಿಲ್ ಅವರ ಪಾದಮುಟ್ಟಿ ನಮಸ್ಕರಿಸುವ ಮೂಲಕ ಭಾವುಕ ಕ್ಷಣಗಳಿಗೆ ಶಾಲೆಯ ಆವರಣ ಸಾಕ್ಷಿಯಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ ಪಾಟೀಲ,ಮಾರ್ಗದರ್ಶಕರಾದ ನಾಗರಾಜಗೌಡ ಬಿರಾಜದಾರ,ವಿದ್ಯಾರ್ಥಿನಿಯ ತಂದೆ ಬಸವರಾಜ ಕಂದಕೂರ,ತಾಯಿ ಗಿರಿಜಾ ಕಂದಕೂರ,ಸoಬoಧಿಕರಾದ ಶಿವಲೀಲಾ ಅಮಾತೆಗೌಡರ,ಗಿರಿಜಾ ಗಂಜಿಹಾಳ ಮೊದಲಾದವರು ಇದ್ದರು.







