ಮುದ್ದೇಬಿಹಾಳ : ಕೆಲವು ಗುತ್ತಿಗೆದಾರರು ಸಹಾಯ ಮಾಡುವುದು ತಮ್ಮ ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಾರೆಯೇ ಹೊರತು ಸಮಾಜಕ್ಕೆ ನಿಸ್ವಾರ್ಥದಿಂದ ಕೊಡುವುದಿಲ್ಲ.ತಾಲ್ಲೂಕಿನಲ್ಲಿ ಕೆಲವು ಗುತ್ತಿಗೆದಾರರಿಗೆ ಕೆಲಸ ಬೇಕು.ಆದರೆ ಸಮಾಜಕ್ಕೆ ಕೊಡುವ ಮಾತು ದೂರ.ಅಂತವರಿಗೆ ಮುಂದಿನ ದಿನಗಳಲ್ಲಿ ಕಡಿವಾಣ ಹಾಕುವ ಕೆಲಸ ಮಾಡುವುದಾಗಿ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿ ಹಮ್ಮಿಕೊಂಡಿದ್ದ ಯಲ್ಲಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿ ಸನ್ 2025-26 ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 25 ಲಕ್ಷ ರೂ.ವೆಚ್ಚದಲ್ಲಿ ಸಭಾಭವನದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಗಳಖೋಡ ಮಠದ ಸಭಾಭವನ ನಿರ್ಮಿಸಲು ಉದಾರವಾಗಿ ಭಕ್ತರು ದೇಣಿಕೆ ನೀಡಬೇಕು.ದಾನ, ದಾಸೋಹ ಅಂದರೆ ನಾಲ್ಕು ಜನರಿಗೆ ಕರೆದು ಊಟ ಹಾಕಿಸುವುದಲ್ಲ.ಅದು ದಾನದ ಒಂದು ಭಾಗ.ನಮ್ಮ ತಾಲ್ಲೂಕಿನಲ್ಲಿ ಗುತ್ತಿಗೆದಾರರ ಕಾಟ ಬಹಳವಾಗಿದೆ.ಕೆಲವು ಗುತ್ತಿಗೆದಾರರು ಸರ್ಕಾರಿ ಕೆಲಸ ಮಾಡಿದರೆ 20 ವರ್ಷದಲ್ಲಿಯೇ ಬಿದ್ದು ಹೋಗುವಂಗೆ ಮಾಡುತ್ತಾರೆ.ಅದೇ ತಮ್ಮ ಸ್ವಂತ ಕೆಲಸ ಮಾಡಿದರೆ 200 ವರ್ಷ ಬಾಳಿಕೆ ಬರುವಂತೆ ಕೆಲಸ ಮಾಡುತ್ತಾರೆ.ಧರ್ಮದ ಕೆಲಸಕ್ಕಾಗಿ ಹಣ ಉಳ್ಳವರು ದಾನ,ದಾಸೋಹ ಮಾಡಬೇಕು.ಇದರ ಕೊರತೆ ನಮ್ಮಲ್ಲಿ ತುಂಬಾ ಇದೆ.ಇನ್ನೊಬ್ಬರನ್ನು ಟೀಕೆ ಮಾಡುವ ಬದಲಾಗಿ ನಮ್ಮ ಧರ್ಮದ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಬೇಕು.ಕೊಟ್ಟಿದ್ದನ್ನು ಕೊಟ್ಟಿದ್ದಾಗಿ ಡಂಗೂರ ಸಾರಿಸುವುದಲ್ಲ ಎಂದು ಹೇಳಿದರು.
ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ, ಏಪಿಎಂಸಿ ಮಾಜಿ ಉಪಾಧ್ಯಕ್ಷ ವಾಯ್.ಎಚ್.ವಿಜಯಕರ್ ಮಾತನಾಡಿದರು. ಗೋವಾ ಕಸಾಪ ಅಧ್ಯಕ್ಷ ಸಿದ್ದಣ್ಣ ಮೇಟಿ,ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ,ಕಸಾಪ ತಾಲ್ಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಸರ್ಕಾರಿ ಆಸ್ಪತ್ರೆಯ ನಾಮನಿರ್ದೇಶಿತ ಸದಸ್ಯ ಸದು ಮಠ,ಮಹ್ಮದರಫೀಕ ಶಿರೋಳ,ಮುಖಂಡರಾದ ಹುಸೇನ್ ಮುಲ್ಲಾ, ಪುರಸಭೆ ಮಾಜಿ ಸದಸ್ಯ ಸದಾಶಿವ ಮಾಗಿ,ಯಲ್ಲಾಲಿಂಗ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್.ಹುನಗುಂದ ಇದ್ದರು.ಎಸ್.ಕೆ.ಹರನಾಳ ನಿರೂಪಿಸಿದರು.ಯಲ್ಲಾಲಿಂಗ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.







